ಬಸವಕಲ್ಯಾಣ (ಬೀದರ್ ಜಿಲ್ಲೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ)ಯ ಸ್ಥಳೀಯ ಘಟಕದಲ್ಲಿ ಬಸ್ ನಿರ್ವಾಹಕ ಶಿವರಾಜ ಎಂ.ಕುಂಬಾರೆ (49) ಬಸ್ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಔರಾದ್ ತಾಲ್ಲೂಕಿನ ಮುಧೋಳ ಗ್ರಾಮದ ಶಿವರಾಜ ಅವರ ಆತ್ಮಹತ್ಯೆಗೆ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ಅವರ ಪುತ್ರ ಅರವಿಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ಕರ್ತವ್ಯ ನಿಯೋಜನೆಗೆ ಘಟಕ ವ್ಯವಸ್ಥಾಪಕ ಮತ್ತು ಇತರೆ ಅಧಿಕಾರಿಗಳು ಲಂಚ ಪಡೆಯುತ್ತಾರೆ. ಹಣ ನೀಡದಿದ್ದರೆ ಕರ್ತವ್ಯಕ್ಕೆ ನಿಯೋಜಿಸುವುದಿಲ್ಲ ಎಂದು ತಂದೆಯವರು ಮನೆಯಲ್ಲಿ ಆಗಾಗ ಹೇಳುತ್ತಿದ್ದರು. ಮೂರು ದಿನಗಳಿಂದ ಅವರನ್ನು ಕರ್ತವ್ಯಕ್ಕೆ ನಿಯೋಜಿಸಿರಲಿಲ್ಲ. ಹೀಗಾಗಿ ಮನೆಯಲ್ಲೇ ಇದ್ದಿರುವುದಾಗಿ ಈಚೆಗೆ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಹೇಳಿದ್ದರು’ ಎಂದು ಅರವಿಂದ ದೂರಿನಲ್ಲಿ ತಿಳಿಸಿದ್ದಾರೆ.
‘ತಂದೆಯವರ ಬಳಿ ಡೈರಿ ಇದ್ದು, ಅವರು ಏನಾದರೂ ಬರೆದಿಟ್ಟಿರುವ ಸಾಧ್ಯತೆ ಇದೆ. ಆದರೆ, ಅದರಲ್ಲಿನ ಕೆಲ ಪುಟಗಳು ಹರಿದಿದ್ದು, ಏನು ಬರೆದಿದ್ದರು ಎಂಬುದು ತಿಳಿಯದಾಗಿದೆ’ ಎಂದು ಅವರು ಹೇಳಿದ್ದಾರೆ.