ವಿಜಯಪುರ: ‘ಧರ್ಮ ಒಡೆಯುವವರನ್ನು ಎದುರಿಸಲು ಪುರುಷರು ಬೇಕಿಲ್ಲ. ನಮ್ಮ ಕೈಗೆ ಒನಕೆ, ಕತ್ತಿ ಸಿಕ್ಕರೆ ಪೀಸ್ ಪೀಸ್ ಆಗಿ ಕತ್ತರಿಸುತ್ತೇವೆ’ ಎಂದು ಕಲಬುರ್ಗಿಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ದಿವ್ಯಾ ರಾಜೇಶ ಹಾಗರಗಿ ಸಮಾವೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಎಂ.ಬಿ.ಪಾಟೀಲರೇ ನಿಮಗೆ ಧಮ್ ಇದ್ದರೆ ಈ ಸಮಾವೇಶಕ್ಕೆ ಬನ್ನಿ. ನಮ್ಮ ಶಕ್ತಿ ಏನೆಂಬುದನ್ನು ಪರಿಚಯಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ನೀವೂ ಈ ಬಾರಿ ಮೂಲೆಗುಂಪಾಗುವುದು ಖಚಿತ’ ಎಂದು ಕಿಡಿಕಾರಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಧರ್ಮದ ವಿಷಯ ನಿಮ್ಗೇನು ಗೊತ್ರೀ ? ವೋಟಿಗಾಗಿ ಧರ್ಮ ಒಡೆಯಬೇಡಿ. ರಾಹುಲ್ ಗುಡಿ–ಗುಂಡಾರ ಸುತ್ತುತ್ತಿರುವುದು ಏತಕ್ಕಾಗಿ? ಬಸವಣ್ಣನವರ ಆಶಯವನ್ನು ಅಕ್ಷರಶಃ ಪಾಲಿಸಿ. ನಿಮ್ಮ ಯಾವ ಶಿಫಾರಸೂ ನಮಗೆ ಲೆಕ್ಕಕ್ಕಿಲ್ಲ. ಅದಕ್ಕೆ ಬೆಲೆಯೂ ಇಲ್ಲ. ಅರ್ಥವೂ ಇಲ್ಲದಾಗಿದೆ. ಧರ್ಮಕ್ಕಾಗಿ ಹೋರಾಡಲು ಕುಟುಂಬದಿಂದ ಹೊರಬೀಳಲು ನಾವೂ ಸಿದ್ಧರಾಗಿದ್ದೇವೆ’ ಎಂದು ಅವರು ಆವೇಶಭರಿತರಾಗಿ ಹೇಳುತ್ತಿದ್ದಂತೆಯೇ ಜಮಾಯಿಸಿದ್ದ ಜನಸ್ತೋಮದ ಕರತಾಡನ ಮುಗಿಲುಮುಟ್ಟಿತು. ಕೆಲವರು ಭಾಷಣವನ್ನು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಿಕೊಂಡರು.