ಶಿಕಾರಿಪುರ: ಪಕ್ಷಭೇದ ಮರೆತು ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅನುದಾನ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಶ್ಲಾಘಿಸಿದರು.
ತಾಲ್ಲೂಕಿನ ಕಲ್ಮನೆ, ಚೌಡಿಹಳ್ಳಿ, ಅಮಟೆಕೊಪ್ಪ, ಗುಡ್ಡದ ತುಮ್ಮಿನಕಟ್ಟೆ, ನಾಗಿಹಳ್ಳಿ, ಗಾಂಧಿನಗರ ಸೇರಿ ವಿವಿಧ ಗ್ರಾಮಗಳಲ್ಲಿ ಶನಿವಾರ ಎಸ್ಟಿಪಿ ಯೋಜನೆ ಅಡಿ ₹ 1.5 ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲಾ ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಪ್ರಾಮಾಣಿಕ ಭ್ರಷ್ಟಾಚಾರ ರಹಿತ ಆಡಳಿತವನ್ನು ರಾಜ್ಯದಲ್ಲಿ ನೀಡಿದ್ದಾರೆ. ರೈತರ ಸಾಲಮನ್ನಾ ಮಾಡುವ ಮೂಲಕ ಬರಗಾಲದಿಂದ ತತ್ತರಿಸಿದ ರೈತರ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದು ಶ್ಲಾಘಿಸಿದರು.
‘ಬಿಜೆಪಿ ಶಾಸಕರಿರುವ ಈ ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ನೀಡಿದ ಅನುದಾನವನ್ನೇ ಯಡಿಯೂರಪ್ಪ ಅವರು ನೀಡಿದ್ದು ಎಂದು ಕ್ಷೇತ್ರದ ಶಾಸಕ ರಾಘವೇಂದ್ರ ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.
ಕಲ್ಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜಪ್ಪ, ಉಪಾಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ದೇವಿಕುಮಾರ್, ಮಯೂರ್ ದರ್ಶನ್, ಸುರೇಶ್, ಗಾಮ ದಯಾನಂದ, ನಿಂಗಪ್ಪ, ದೇವೇಂದ್ರಪ್ಪ, ಸಿದ್ದಪ್ಪ, ಸುರೇಶ್ ಧಾರಾವಾಡ ಉಪಸ್ಥಿತರಿದ್ದರು.