ಆಗಲೇ ನಾನು ಸಾಹಿತ್ಯದ ಗೀಳು ಹಚ್ಚಿಕೊಂಡು ಪಠ್ಯೇತರ ಪುಸ್ತಕಗಳನ್ನೇ ಹೆಚ್ಚೆಚ್ಚು ಓದುತ್ತಿದ್ದೆ. ಜೊತೆಗೆ ಸಣ್ಣ ಕವನ, ಬರಹಗಳನ್ನು ಬರೆಯುತ್ತಿದ್ದೆ. ನನ್ನ ಒಬ್ಬ ಸಹಪಾಠಿಯಿಂದ ಈ ವಿಷಯ ತಿಳಿದುಕೊಂಡ ಅವರು, ಒಂದು ದಿನ ತಮ್ಮ ಕೋಣೆಗೆ ನನ್ನನ್ನು ಕರೆಸಿಕೊಂಡರು. ನಾನು ಬರೆದಿಟ್ಟುಕೊಂಡಿದ್ದ, ಆ ನನ್ನ ಬರಹಗಳನ್ನು ಓದಿ ಬೆನ್ನು ತಟ್ಟಿದರು. ‘ಹೀಗೆ ಬರಿಯೋ, ಇದನ್ನೆಲ್ಲಾ ನೋಡಿ ನನಗೆ ನಿನ್ನೊಳಗೊಬ್ಬ ಲೇಖಕ ಇದ್ದಾನೆಂದು ಅನಿಸುತ್ತಿದೆ. ಕುವೆಂಪು, ಬೇಂದ್ರೆ, ತೇಜಸ್ವಿ, ಕಾರಂತ, ಕಾಯ್ಕಿಣಿಯಂತಹ ಲೇಖಕರ ಕೃತಿಗಳನ್ನು ಓದು’ ಎಂದು ಪ್ರೋತ್ಸಾಹ ನೀಡಿದರು. ಅವರ ಮಾತುಗಳು ನನ್ನ ಹವ್ಯಾಸಕ್ಕೆ ಮತ್ತಷ್ಟು ಇಂಬು ನೀಡಿತು. ನಾನು ಯುವ ಸಾಹಿತಿ ಎಂದು ಹೆಸರು ಗಳಿಸಲು ಅವರೇ ಕಾರಣ.