ನವದೆಹಲಿ: ವಿರೋಧ ಪಕ್ಷಗಳ ಗದ್ದಲ, ಪ್ರತಿಭಟನೆಗಳಿಂದಾಗಿ ವ್ಯರ್ಥವಾಗಿದ್ದ ಸಂಸತ್ತಿನ ಎರಡೂ ಸದನಗಳ ಕಲಾಪ ಮೂರು ದಿನಗಳ ರಜೆಯ ನಂತರ ಮಂಗಳವಾರ ಮತ್ತೆ ಆರಂಭವಾಗಲಿವೆ.
ಸತತ ಗದ್ದಲದಿಂದಾಗಿ ಕಲಾಪ ನಡೆಯದ ಕಾರಣ ಟಿಆರ್ಎಸ್ ಮತ್ತು ವೈಎಸ್ಆರ್ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಬಂದಿರಲಿಲ್ಲ.
ಲೋಕಸಭೆಯಲ್ಲಿ ಮಂಗಳವಾರ ಹೊಸ ಅವಿಶ್ವಾಸ ಗೊತ್ತುವಳಿಗಳು ಮಂಡನೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್, ಸಿಪಿಎಂ ಮತ್ತು ಆರ್ಎಸ್ಪಿ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿವೆ.
ಇಲ್ಲಿಯವರೆಗೆ ಎರಡೂ ಸದನಗಳಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ತೆಲಂಗಾಣದ ಟಿಆರ್ಎಸ್ ಸಂಸದರು ಈಗ ಚರ್ಚೆಯಲ್ಲಿ ಭಾಗವಹಿಸುವ ನಿರ್ಧಾರ ಕೈಗೊಂಡಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸುವುದಾಗಿ ಟಿಆರ್ಎಸ್ ಮುಖ್ಯಸ್ಥ ಕೆ. ಸಿ. ಚಂದ್ರಶೇಖರ್ ರಾವ್ ಅವರ ಮಗಳು ಮತ್ತು ಸಂಸದೆ ಕೆ. ಕವಿತಾ ಹೇಳಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಎಐಎಡಿಎಂಕೆ ಸದಸ್ಯರು ಎರಡೂ ಸದನದಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
ಇದರಿಂದಾಗಿ ಮಂಗಳವಾರ ಕೂಡ ಸುಗಮ ಕಲಾಪ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆಗೆ ಅವಕಾಶ ನೀಡಲು ಕನಿಷ್ಠ 50 ಸಂಸದರ ಬೆಂಬಲ ಇದೆಯೋ ಅಥವಾ ಇಲ್ಲವೋ ಎಂದು ತಲೆ ಎಣಿಕೆ ಮಾಡಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಇದುವರೆಗೂ ಸಾಧ್ಯವಾಗಿಲ್ಲ.