ಬೆಂಗಳೂರು: ವರ್ಗಾವಣೆ ಆದೇಶ ಪ್ರಶ್ನಿಸಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಹೈಕೋರ್ಟ್ ನಿರಾಕರಿಸಿದೆ.
‘ಇಂದೇ (ಮಾರ್ಚ್ 26) ಅರ್ಜಿ ವಿಚಾರಣೆ ನಡೆಸಬೇಕು’ ಎಂಬ ರೋಹಿಣಿ ಪರ ವಕೀಲರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಒಪ್ಪಲಿಲ್ಲ.
ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸುಬ್ರಹ್ಮಣ್ಯ ಜೋಯಿಸ್, ‘ರಾಜ್ಯದ ಆಡಳಿತದಲ್ಲಿ ಅರಾಜಕತೆ ಇದೆ. ಬೇಕಾಬಿಟ್ಟಿ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ಆಕ್ಷೇಪಿಸಿದರು.
ಇದಕ್ಕೆ ನ್ಯಾಯಪೀಠ, ‘ಸರದಿಯ ಅನುಸಾರವೇ ಅರ್ಜಿ ವಿಚಾರಣೆಗೆ ಬರಲಿ ನೋಡೋಣ’ ಎಂದು ಪ್ರತಿಕ್ರಿಯಿಸಿ ಮಂಗಳವಾರಕ್ಕೆ (ಮಾರ್ಚ್ 27) ವಿಚಾರಣೆ ಮುಂದೂಡಿದೆ.