ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ

Last Updated 27 ಮಾರ್ಚ್ 2018, 4:46 IST
ಅಕ್ಷರ ಗಾತ್ರ

ವಿಜಯಪುರ: ಸ್ವಚ್ಛತೆ ಕಾಣದ ಕಿಷ್ಕಿಂಧೆಯಂತಹ ಊರಿನ ಬೀದಿಗಳು, ಕುಡಿಯುವ ನೀರಿಗಾಗಿ ಜನರ ಪರದಾಟ, ಒಳಚರಂಡಿ ಅವ್ಯವಸ್ಥೆ, ಸೊಳ್ಳೆಗಳ ಕಾಟ, ಆಸನ ವ್ಯವಸ್ಥೆ ಇಲ್ಲದ ಬಸ್ ನಿಲ್ದಾಣ, ಮಾರುಕಟ್ಟೆಗಾಗಿ ರೈತರ ಸೆಣಸಾಟ ಇಲ್ಲಿನ ಜನರ‌ ನಿತ್ಯ ಸಂಕಷ್ಟ ಎಂದು ಸ್ಥಳೀಯ ನಿವಾಸಿಗಳಾದ ಸೋಮಶೇಖರ್, ಅರುಣ್ ಬಾಬು, ಲೊಕೇಶ್ ಗೌಡ, ಪರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ದೇವಾಲಯಗಳ ನಗರಿಯೆಂದೇ ಖ್ಯಾತಿಯ ವಿಜಯಪುರ ದಲ್ಲಿ ಮೂಲ ಸೌಕರ್ಯಗಳದ್ದೇ ಕೊರತೆ. ರೈತಾಪಿ ಕೂಲಿಕಾರ್ಮಿಕರನ್ನು ಹೆಚ್ಚು ಹೊಂದಿರುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಯಲ್ಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ವಿಜಯಪುರ ಅಭಿವೃದ್ಧಿಯಲ್ಲಿ ಮಾತ್ರ ಹಿಂದುಳಿದಿದೆ.‌

ತಾಲ್ಲೂಕು ಕೇಂದ್ರ ಒತ್ತಾಯಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಶಾಶ್ವತ ನೀರು ಪೂರೈಸುವ ಕೆರೆಕಟ್ಟೆಗಳ ಅಭಿವೃದ್ಧಿ ಆಗಿಲ್ಲ. ವಿಜಯಪುರ ಕೆರೆ, ಭಟ್ರೇನಹಳ್ಳಿಕೆರೆ, ಭದ್ರಯ್ಯನಕೆರೆ, ಯಲುವಹಳ್ಳಿ ಕೆರೆಗಳು ಬಹುಪಾಲು ನಿರ್ಲಕ್ಷ್ಯಕ್ಕೆ ಒಳಗಾಗಿ ಭೂ ಒತ್ತುವರಿಯಾಗಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಅನೈರ್ಮಲ್ಯ ತಾಂಡವ: ಪುರಸಭೆ ವ್ಯಾಪ್ತಿಯಲ್ಲಿರುವ ಬಹುತೇಕ ವಾರ್ಡ್‌ ಗಳಲ್ಲಿ ನೈರ್ಮಲ್ಯದ ಕೊರತೆ ಕಾಡುತ್ತಿದೆ. ಒಳಚರಂಡಿ ವ್ಯವಸ್ಥೆ ಇದ್ದರೂ ನಿರ್ವಹಣೆ ಇಲ್ಲ. ಕೊಳಚೆ ನೀರು ಸಂಸ್ಕರಿಸುವ ಘಟಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಮಾರುಕಟ್ಟೆಯ ಸೌಲಭ್ಯವಿಲ್ಲ: ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ.

ಆದರೆ, ಈ ರೈತರಿಗೆ ಅನುಕೂಲ ವಾಗುವ ಮಾರುಕಟ್ಟೆ ಸೌಲಭ್ಯ ಇಲ್ಲ; ಶೀತಲೀಕರಣ ಘಟಕದ ನಿರ್ಮಾಣವಾಗಿಲ್ಲ. ಇದರಿಂದ ರೈತರು ಪರಡಾಡುವಂತಾಗಿದೆ.

ಬೆಂಗಳೂರಿಗೆ ಸಮೀಪ ಇದ್ದರೂ, ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವಂತಹ ಯಾವುದೇ ಕೈಗಾರಿಕೆಗಳು ಇಲ್ಲ.

ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವಂತಹ ಜನಪ್ರತಿನಿಧಿ ಗಳಾದರೂ ಅಭಿವೃದ್ಧಿಗೆ ಮುಂದಾಗುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ ಎನ್ನುತ್ತಾರೆ ವಿಜಯಪುರದ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT