ಚಿಕ್ಕಮಗಳೂರು: ಎಡಪಂಥೀಯ ತೀವ್ರಗಾಮಿಗಳ ಶರಣಾಗತ ಯೋಜನೆಯಡಿ ಶರಣಾಗತರಾಗಿ 2016ರ ನವೆಂಬರ್ 14ರಂದು ಮುಖ್ಯವಾಹಿನಿಗೆ ಬಂದಿದ್ದ ರಿಜ್ವಾನಾ ಬೇಗಂ ಅವರಿಗೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ₹ 2.5 ಲಕ್ಷ ಮೊತ್ತದ ಚೆಕ್ ಅನ್ನು ಸೋಮವಾರ ವಿತರಿಸಿದರು.
ಜಿಲ್ಲಾಧಿಕಾರಿ ಶ್ರೀರಂಗಯ್ಯ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ರಿಜ್ವಾನಾ ಅವರಿಗೆ ₹ 2.5 ಲಕ್ಷ ಮೊತ್ತದ ಚೆಕ್ ವಿತರಿಸಲಾಗಿದೆ. ₹ 2.5 ಲಕ್ಷ ಸಾಲ ಒದಗಿಸುವಂತೆ ಬೆಂಗಳೂರಿನ ಡಿಸಿಸಿ ಬ್ಯಾಂಕಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.
‘ಬೆಂಗಳೂರು ನಗರ ಅಥವಾ ಗ್ರಾಮಾಂತರ ವ್ಯಾಪ್ತಿಯಲ್ಲಿ ಜಮೀನು ಒದಗಿಸುವಂತೆ ಈ ಹಿಂದೆ ಕೋರಿಕೆ ಇಟ್ಟಿದ್ದರು. ಈಗ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲೇ ಜಮೀನು ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಜಮೀನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಶರಣಾಗತಿ ಸಮಿತಿಯು ಪರಿಹಾರ ಕೋರಿಕೆ ಅರ್ಜಿಯನ್ನು ಫೆಬ್ರುವರಿ 26ರಂದು ಪರಿಶೀಲನೆ ಮಾಡಿತ್ತು. ನಕ್ಸಲ್ ಪ್ಯಾಕೇಜ್ನಡಿ ಪರಿಹಾರ ವಿತರಿಸಲು ತೀರ್ಮಾನಿಸಿತ್ತು.
ಪರಶುರಾಂ ಮತ್ತು ರಿಜ್ವಾನಾ ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದರು. ಇವರಿಬ್ಬರು ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ರಿಜ್ವಾನಾ ಅವರು ಮನೆಯಲ್ಲಿ ಟೈಲರಿಂಗ್ ಮಾಡುತ್ತಿದ್ದಾರೆ. ಪರಶುರಾಂ ಅವರು ಚಾಲನಾ ವೃತ್ತಿ ಮಾಡುತ್ತಿದ್ದಾರೆ.