ಬೆಂಗಳೂರು: ಇದೇ ಶನಿವಾರ (ಮಾರ್ಚ್ 31) ಬ್ಯಾಂಕ್ಗಳು ಎಂದಿನಂತೆ ಗ್ರಾಹಕರ ಸೇವೆಗೆ ತೆರೆದಿರುತ್ತವೆ.
‘ಮಾರ್ಚ್ 29 ರಿಂದ ಐದು ದಿನಗಳವರೆಗೆ ಬ್ಯಾಂಕಿಂಗ್ ವಹಿವಾಟು ನಡೆಯುವುದಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ’ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ (ಐಎನ್ಬಿಇಎಫ್) ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ. ನರಸಿಂಹ ಮೂರ್ತಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
‘ಮಹಾವೀರ ಜಯಂತಿ ಹಾಗೂ ಗುಡ್ ಫ್ರೈಡೆ ಇರುವುದರಿಂದ ಗುರುವಾರ (ಮಾ. 29) ಮತ್ತು ಶುಕ್ರವಾರ (ಮಾ. 30) ಸಾರ್ವತ್ರಿಕ ರಜಾ ದಿನಗಳಾಗಿವೆ. ಆದರೆ ಶನಿವಾರ (31) ಎಂದಿನಂತೆಯೇ ಬ್ಯಾಂಕ್ನಲ್ಲಿ ಹಣ ಸ್ವೀಕೃತಿ, ಪಾವತಿ ಕೆಲಸಗಳು ನಡೆಯಲಿವೆ.
ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಂದು ಕೆಲಸದ ಅವಧಿಯನ್ನು ಅರ್ಧದಿಂದ ಒಂದು ಗಂಟೆಯವರೆಗೆ ವಿಸ್ತರಿಸುವ ಸಾಧ್ಯತೆಯೂ ಇದೆ.
‘ಏಪ್ರಿಲ್ 1 ಭಾನುವಾರ ಆಗಿರುವುದರಿಂದ ರಜಾ ದಿನ. ಹೀಗಾಗಿ ವಾರ್ಷಿಕ ಲೆಕ್ಕಪತ್ರ ಅಂತಿಮಗೊಳಿಸಲು ಏಪ್ರಿಲ್ 2 ರಂದು ಬ್ಯಾಂಕ್ಗಳು ಕಾರ್ಯನಿರ್ವಹಿಸಿದರೂ ಅಂದು ಗ್ರಾಹಕರ ಸೇವೆಗಳು ಲಭ್ಯವಿರುವುದಿಲ್ಲ. ಏ. 3 ರಿಂದ ಗ್ರಾಹಕರ ಸೇವೆಗಳು ಲಭ್ಯವಾಗಲಿವೆ’ ಎಂದು ಅವರು ತಿಳಿಸಿದ್ದಾರೆ.