ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾ, ಸಿದ್ದರಾಮಯ್ಯ ಟ್ವೀಟ್ ಸಮರ

Last Updated 27 ಮಾರ್ಚ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯ ಸಾಲುಗಳನ್ನು ಉಲ್ಲೇಖಿಸಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ಮಂಗಳವಾರ ಅವರ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಕುವೆಂಪು ಸಮಾಧಿ ಸ್ಥಳ ಕವಿಶೈಲಕ್ಕೆ ಭೇಟಿ ನೀಡಿದ ಬಳಿಕ ಅಮಿತ್‌ ಶಾ ‘ಕುವೆಂಪುರವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕೊಂಡಾಡಿದ್ದರು. ಅಂತಹ ಶಾಂತಿಯ ಬೀಡಾದ ಈ ರಾಜ್ಯವನ್ನು ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಕೋಮು ಸಂಘರ್ಷ ಮತ್ತು ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿದ್ದು ಅತ್ಯಂತ ಖಂಡನೀಯ. ಇದಕ್ಕೆ ಅವರು ಬೆಲೆ ತೆರುತ್ತಾರೆ’ ಎಂದು ಟ್ವೀಟ್ ಮಾಡಿದ್ದರು.

ಅಮಿತ್ ಶಾ ಅವರ ಟ್ವೀಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿರುಗೇಟು ನೀಡಿದ್ದು ಅವರೂ ಕೂಡ ನಾಡಗೀತೆಯ ಸಾಲುಗಳನ್ನೇ ಉಲ್ಲೇಖಿಸಿ ಅಮಿತ್‌ ಶಾಗೆ ತಿರುಗೇಟು ಕೊಟ್ಟಿದ್ದಾರೆ.

’ಅಮಿತ್‌ ಶಾ ಅಂತಹವರು ಸಹ ಕುವೆಂಪು ನುಡಿಗಳನ್ನು ಬಳಸುವಂತೆ ಮಾಡಿದ ಕರ್ನಾಟಕದ ಚುನಾವಣೆಗೆ ಧನ್ಯವಾದ ಹೇಳುತ್ತೇನೆ. ರಾಷ್ಟ್ರಕವಿಯ ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನದಿಂದ ಹೊರತಾದ ಪಕ್ಷವನ್ನು ಪ್ರತಿನಿಧಿಸುವ  ಶಾ ತಾವು ಉಲ್ಲೇಖಿಸಿರುವ ‘ಸರ್ವ ಜನಾಂಗದ ಶಾಂತಿಯ ತೋಟ’ ಚರಣದಲ್ಲಿನ (ಪ್ಯಾರಾ) ಮುಂದಿನ ಸಾಲುಗಳನ್ನು ಬಹುಶ: ಓದಿರಲಿಕ್ಕಿಲ್ಲ’ (ಆ ಚರಣದ ಮುಂದಿನ ಸಾಲುಗಳಾದ ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ, ಜನಕನ ಹೋಲುವ ದೊರೆಗಳ ಧಾಮ’) ಎಂದು ಟ್ವೀಟ್‌ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಈ ಟ್ವೀಟ್‌ ಅನ್ನು 2400 ಜನ ಲೈಕ್‌ ಮಾಡಿದ್ದರೆ 900 ಜನ ರಿಟ್ವೀಟ್‌ ಮಾಡಿದ್ದಾರೆ. ಹಾಗೇ ಅಮಿತ್ ಶಾ ಟ್ವೀಟ್‌ಗೆ 1700 ಜನ ಲೈಕ್ ಮಾಡಿ, 420 ಮಂದಿ ರಿಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ನಲ್ಲಿ ನಾಡಗೀತೆಯ ಸಾಲುಗಳನ್ನು ಬಳಸಿಕೊಂಡು ಪರಸ್ಪರಕಾಲೆಳೆದುಕೊಂಡಿದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT