ಕೂಡ್ಲಿಗಿ: ‘ರಾಜ್ಯದ ಅಭಿವೃದ್ಧಿಯನ್ನು ಮರೆತು ವೇದಿಕೆಗಳಲ್ಲಿ ನಿದ್ದೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆರಾಮಯ್ಯ ಅಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಸಹ ಪ್ರಭಾರಿ ಪುರಂದೇಶ್ವರಿ ವ್ಯಂಗ್ಯವಾಡಿದರು.
ತಾಲ್ಲೂಕಿನ ರಾಮದುರ್ಗ ಗ್ರಾಮದಲ್ಲಿ ಕೂಡ್ಲಿಗಿ ಮಂಡಲ ವತಿಯಿಂದ ಸೋಮವಾರ ಏರ್ಪಡಿಸಿದ್ದ ನವ ಕರ್ನಾಟಕ ನಿರ್ಮಾಣಕ್ಕಾಗಿ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.‘ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾರ್ಗದರ್ಶದನಲ್ಲಿ ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ನಮ್ಮ ಮುಂದಿನ ಗುರಿ ಕರ್ನಾಟಕ. ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತದಿಂದ ರೋಸಿ ಹೋಗಿರುವ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ಇಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದರಲ್ಲಿ ಅನುಮಾನವಿಲ್ಲ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ಕರ್ನಾಟಕ್ಕೆ ಹೋದರೆ ಯಾವುದೇ ತೊಂದರೆ ಇಲ್ಲ ಎನ್ನುವ ದೈರ್ಯದಿಂದ ದೇಶದ ಬೇರೆ ಬೇರೆ ಭಾಗಗಳಿಂದ ಮಹಿಳೆಯರು ಬರುತ್ತಿದ್ದರು. ಆದರೆ ಇಂದು ರಾಜ್ಯ ಅಪರಾಧಿಗಳ ರಾಜಧಾನಿಯಾಗಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.
‘ರಾಜ್ಯ ಸರ್ಕಾರವು ಸಹಕಾರ ಸಂಘಗಳಲ್ಲಿನ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಿದೆ. ಆದರೆ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಎಲ್ಲಾ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಲಾಗಿದೆ’ ಎಂದರು.ಜಿಲ್ಲಾ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ ಮಾತನಾಡಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಚನ್ನಬಸವನಗೌಡ, ಸಂಸದ ಬಿ. ಶ್ರೀರಾಮುಲು, ನಾಗರಾಜ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಸರೋಜಮ್ಮ, ಪಾಪನಾಯಕ, ರಾಜಕುಮಾರ್ ನಾಯ್ಕ್, ಶ್ರೀನಿವಾಸಲು, ಟಿ.ಜಿ. ಮಲ್ಲಿಕಾರ್ಜುನ ಗೌಡ, ಮಂಡಲ ಅಧ್ಯಕ್ಷ ಕೆ.ಎಚ್. ವೀರನಗೌಡ, ಮಂಡಲ ಪ್ರಭಾರ ಕೆ.ಎಂ. ತಿಪ್ಪೇಸ್ವಾಮಿ ಇದ್ದರು.
ಸಿರುಗುಪ್ಪ ತವರು ಮನೆ: ಪುರಂದೇಶ್ವರಿ
ಸಿರುಗುಪ್ಪ: ‘ಸಿರುಗುಪ್ಪ ನನ್ನ ತವರು ಮನೆಯಂತೆ’ ಎಂದು ಬಿಜೆಪಿ ರಾಜ್ಯ ಸಹಪ್ರಭಾರಿ ಪುರಂದೇಶ್ವರಿಹೇಳಿದರು.ಇಲ್ಲಿನ ಮಾರುತಿ ಫಂಕ್ಷನ್ ಹಾಲ್ನಲ್ನಲ್ಲಿ ಭಾನುವಾರ ಸಂಜೆ ಬಿಜೆಪಿ ಏರ್ಪಡಿಸಿದ್ದ ಮುಷ್ಟಿ ಧಾನ್ಯ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ನನ್ನ ತಂದೆ ನಂದಮೂರಿ ತಾರಕರಾಮರಾವ್ ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಇಲ್ಲಿ ಉಪನೋಂದಣಿ ಕಚೇರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು’ ಎಂದು ಸ್ಮರಿಸಿದರು.