ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಹುಡುಗ ನಿತೇಶ ಸಾಧನೆ ಮಾದರಿ

ಅಭಿನಂದನಾ ಸಮಾರಂಭದಲ್ಲಿ ರಾಜಶೇಖರ ಬಿ.ಪಾಟೀಲ
Last Updated 28 ಮಾರ್ಚ್ 2018, 11:09 IST
ಅಕ್ಷರ ಗಾತ್ರ

ಹುಮನಾಬಾದ್: ‘ಚಿನ್ನದ ಹುಡುಗ ನಿತೇಶ ಹೊಸಮನಿ ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿ’ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಹೇಳಿದರು.

ಇಲ್ಲಿನ ಸಿದ್ದಾರ್ಥ ಕಾಲೊನಿ ಬುದ್ಧಿಷ್ಟ್‌ ಸರ್ಕಾರಿ ನೌಕರರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ನಿತೇಶ ಹೊಸಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಧನೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದಕ್ಕೆ ನಿತೇಶ ಉತ್ತಮ ನಿದರ್ಶನ. ವಿದ್ಯೆಯಲ್ಲಿ ಸಾಧನೆ ಗೈದ ಬಗ್ಗೆ ಕಿಂಚಿತ್ತೂ ಅಹಂಕಾರಿಯಾಗದೇ ಪಾಲಕರು ಮತ್ತು ಗುರು ಹಿರಿಯರ ಕುರಿತು ಹೊಂದಿರುವ ಗೌರವ ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಹೇಳಿದರು.

ಗುಲಬರ್ಗಾ ವಿವಿ ಸಸ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಡಾ.ವೆಂಕಟ್‌ ಸಿಂಧೆ ಮಾತನಾಡಿ, ‘ನಿತೇಶ ಸತತ ಪರಿಶ್ರಮಪಟ್ಟು ತನ್ನ ಗುರಿ ಸಾಧಿಸಿದ್ದಾನೆ. ದೊಡ್ಡ ವಿಜ್ಞಾನಿ ಆಗುವ ಎಲ್ಲ ಲಕ್ಷಣಗಳು ನಿತೇಶನಲ್ಲಿವೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಆತನಿಗೆ ಅವಕಾಶಗಳಿವೆ. ಸಸ್ಯಶಾಸ್ತ್ರ ವಿಭಾಗದಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಆದರೇ ಗುರುವಿನ ಹೃದಯ ಕದ್ದಾತ ನಿತೇಶ ಮಾತ್ರ ಅದನ್ನು ಹೇಳಲು ಹೆಮ್ಮೆ ಅನ್ನಿಸುತ್ತದೆ’ ಎಂದರು.

ಡಿಡಿಪಿಐ ಇನಾಯತ್–ಅಲಿ ಸಿಂಧೆ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಡಾ.ಟಿ.ಆರ್‌.ದೊಡ್ಡೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ, ಡಾ.ಜಯಕುಮಾರ ಸಿಂಧೆ, ಪೂಜ್ಯ ಶಿವಲಿಂಗಪ್ಪ ಚತೂರೆ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಕೆ.ಬಿ.ಹಾಲ್ಗೋರ್ಟಾ, ನಿವೃತ್ತ ಪ್ರಾಧ್ಯಾಪಕ ಶರಣಪ್ಪ ದಂಡೆ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಚ್ಚಿದಾನಂದ ಮಠಪತಿ ಮಾತನಾಡಿದರು.ಸಂಜೀವಕುಮಾರ ಹೊಸಮನಿ ಸ್ವಾಗತಿಸಿದರು. ರಾಜೀವಕುಮಾರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ಸಂಯೋಜಕ ರಮೇಶ ರಾಜೋಳೆ ನಿರೂಪಿಸಿದರು. ಸುಕೇಶಕುಮಾರ ಹೊಸಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT