ಬೆಂಗಳೂರು: ಕೃಷಿ ಕ್ಷೇತ್ರಕ್ಕೆ ತಾಂತ್ರಿಕ ನೆರವು ನೀಡುವ ಸಂಬಂಧ ಭಾರತ–ಇಸ್ರೇಲ್ ನಡುವೆ ವಿವಿಧ ಒಪ್ಪಂದಗಳಾಗಿವೆ ಎಂದು ಇಸ್ರೇಲ್ ಕಾನ್ಸಲ್ ಜನರಲ್ (ದಕ್ಷಿಣ ಭಾರತ) ದಾನಾ ಕರ್ಷ್ ತಿಳಿಸಿದರು.
ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಸ್ರೇಲ್ ಹಾಗೂ ರಾಜ್ಯದ ಕೃಷಿಯಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಅಲ್ಲಿ ಬಳಸಿದ ತಂತ್ರಜ್ಞಾನವನ್ನು ಇಲ್ಲಿಯೂ ಸುಲಭವಾಗಿ ಅಳವಡಿಸಬಹುದು ಎಂದರು.
ನೀರಿನ ಪರಿಣಾಮಕಾರಿ ಬಳಕೆಗೆ ಇಸ್ರೇಲ್ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅನ್ವೇಷಿಸಿದೆ. ಅದನ್ನು ಇಲ್ಲಿ ಅಳವಡಿಸುವ ಮೂಲಕ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಪ್ರವಾಹದ ರೀತಿಯಲ್ಲಿ ನೀರನ್ನು ಹರಿಸಿದಾಗ ಶೇ 50ರಷ್ಟು ನೀರು ಮಾತ್ರ ಬಳಕೆಯಾಗುತ್ತದೆ. ಹನಿ ನೀರಾವರಿಯಲ್ಲಿ ಶೇ 80ರಷ್ಟು ನೀರನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬಹುದು. ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ನೀರು ವ್ಯರ್ಥವಾಗುವುದು ಶೇ 5ರಷ್ಟು ಮಾತ್ರ ಎಂದರು.
ಅಭಿವೃದ್ಧಿ ಆಯುಕ್ತ ಡಿ.ವಿ. ಪ್ರಸಾದ್, ‘ಭಾರತದಲ್ಲಿ ಶೇ 50 ಜನ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಅಗತ್ಯವಿದೆ. ಕೃಷಿಗೆ ಸಂಬಂಧಿಸಿದ ಎಲ್ಲಾ ತಂತ್ರಜ್ಞಾನ ಒಂದೇ ಕಡೆ ಲಭ್ಯವಾಗುವಂತಾಗಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.