ಶ್ರೀರಂಗಪಟ್ಟಣ: ‘ರಾಹುಲ್ಗಾಂಧಿ ಅವರು ಕಾಂಗ್ರೆಸ್ ಬಾವುಟ ಕೊಟ್ಟು ಬರಮಾಡಿಕೊಂಡವರು ಯಾರೂ ಇದುವರೆಗೆ ಚುನಾವಣೆಗಳಲ್ಲಿ ಗೆದ್ದಿಲ್ಲ. ಅವರಿಂದ ಕಾಂಗ್ರೆಸ್ ಬಾವುಟ ಸ್ವೀಕರಿಸಿರುವ ರಮೇಶ ಬಂಡಿಸಿದ್ದೇಗೌಡ ಕೂಡ ಗೆಲ್ಲುವುದಿಲ್ಲ’ ಎಂದು ಜೆಡಿಎಸ್ ಮುಖಂಡ ರವೀಂದ್ರ ಶ್ರೀಕಂಠಯ್ಯ ಭವಿಷ್ಯ ನುಡಿದರು.
ತಾಲ್ಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಜೆಡಿಎಸ್ ಮುಖಂಡರ ಬಗ್ಗೆ ರಾಹುಲ್ ಲಘುವಾಗಿ ಮಾತನಾಡುವ ಮೂಲಕ ತಾವು ಇನ್ನೂ ಅಪ್ರಬುದ್ಧರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ರೈತರು ಮೃತಪಟ್ಟರೂ ಸಂಪೂರ್ಣ ಸಾಲ ಮನ್ನಾ ಮಾಡಲು ನಿರಾಕರಿಸಿದೆ. ರೈತರ ಬದುಕು ಹಸನಾಗಬೇಕಾದರೆ ಜೆಡಿಎಸ್ ಸರ್ಕಾರ ಬರಬೇಕು’ ಎಂದು ಹೇಳಿದರು.
ಜೆಡಿಎಸ್ ನಾಯಕಿ ಲಕ್ಷ್ಮಿ ಅಶ್ವಿನ್ಗೌಡ, ‘ಸಿದ್ದರಾಮಯ್ಯ ಸರ್ಕಾರ ಜಾತಿ, ಧರ್ಮಗಳನ್ನು ಒಡೆಯುತ್ತಿದ್ದು, ಸಾಮಾಜಿಕ ಅಶಾಂತಿ ಸೃಷ್ಟಿಸುತ್ತಿದೆ. ರೈತರ ಬಗ್ಗೆ ಅಪಾರ ಕಾಳಜಿ ಇರುವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರೈತರು ಸಂಕಷ್ಟದಿಂದ ಪಾರಾಗಲಿದ್ದಾರೆ. ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲಿದೆ’ ಎಂದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ಮುಕುಂದ, ಕಾರ್ಯಾಧ್ಯಕ್ಷ ಎನ್.ಶಿವಸ್ವಾಮಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪದ್ಮನಾಭ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾ ವಿಜೇಂದ್ರು, ನಗರ ಘಟಕದ ಅಧ್ಯಕ್ಷ ಎಂ. ಸುರೇಶ್ ಇದ್ದರು.