ಮುಂಡರಗಿ (ಗದಗ ಜಿಲ್ಲೆ): ತಾಲ್ಲೂಕಿನ ಕಪ್ಪತಗುಡ್ಡದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು, ಆಸುಪಾಸಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
‘ಕಾಡು ಪ್ರಾಣಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಪ್ಪತಗುಡ್ಡದ ಕೆಲವು ಭಾಗಗಳಲ್ಲಿ ನಿರ್ಮಿಸಲಾದ ಕೃತಕ ಹೊಂಡಗಳಲ್ಲಿ ನೀರು ತುಂಬಿಸಲಾಗಿದೆ. ರಾತ್ರಿ ವೇಳೆ ಇಲ್ಲಿಗೆ ನೀರು ಕುಡಿಯಲು ಬಂದಿದ್ದ ಮೂರು ಚಿರತೆಗಳು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ’ ಎಂದು ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮತಿ ತಿಳಿಸಿದರು.
‘ಕಪ್ಪತಗುಡ್ಡದ ಅಂಚಿನಲ್ಲಿರುವ ವಿವಿಧ ಗ್ರಾಮಗಳ ಜನರಿಗೆ ಈ ಹಿಂದೆ ಆಗಾಗ್ಗೆ ಚಿರತೆಗಳು ಕಂಡಿವೆ. ಆದರೆ, ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿರಲಿಲ್ಲ. ಇನ್ನಾದರೂ ಅದನ್ನು ಒಪ್ಪಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ರಾಮಚಂದ್ರ ಬಾದಾಮಿ ಒತ್ತಾಯಿಸಿದರು.