ಕುಮಟಾ : ‘ರಾಜನಾಗಿ ವೈಭವಯುತ ಜೀವನ ನಡೆಸುವ ಅವಕಾಶವಿದ್ದರೂ ಸನ್ಯಾಸ ಸ್ವೀಕರಿಸುವ ಮೂಲಕ ಭಗವಾನ್ ಮಹಾವೀರ ಇಡೀ ಜಗತ್ತಿಗೆ ಸರಳತೆ ಮೂಲಕ ಮಾದರಿಯಾದನು’ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಭಟ್ಟ ಹೇಳಿದರು.ಗುರುವಾರ ನಡೆದ ಮಹಾವೀರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಹಿಂದೆ ದೇವರ ಸಾಕ್ಷಾತ್ಕಾರಕ್ಕೆ ಯಾಗ, ಯಜ್ಞದ ಮೊರೆ ಹೋಗುತ್ತಿದ್ದ ಕಾಲದಲ್ಲಿ ತ್ಯಾಗ, ಧ್ಯಾನ, ಸರಳತೆ ಹಾಗೂ ಸುಖ, ದುಃಖವನ್ನು ಸಮನಾಗಿ ನೋಡುವ ಮೂಲಕ ದೇವರನ್ನು ಕಾಣಬಹುದು ಎನ್ನುವುದನ್ನು ಭಗವಾನ್ ಮಹಾವೀರ ತೋರಿಸಿಕೊಟ್ಟ. ಮಹಾವೀರನ ಈ ತತ್ವವನ್ನು ಅನೇಕರು ಅನುಸರಿಸಿದರು.
ಜೈನ ಧರ್ಮ ಪ್ರವರ್ಧಮಾನಕ್ಕೆ ಬಂದದ್ದೂ ಮಹಾವೀರನ ಕಾಲದಲ್ಲಿ’ ಎಂದು ಹೇಳಿದರು.ಪ್ರಭಾರಿ ತಹಶೀಲ್ದಾರ್ ಬಿ.ಎಚ್.ಗುನಗಾ ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ ಕುರಿಯವರ್, ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಜಿ.ಗುನಗಿ, ಆರ್.ಜಿ.ಭಟ್ಟ, ಪ್ರೊಬೆಶನರಿ ತಹಶೀಲ್ದಾರ್ ಕಿಶನ್ ಕಲಾಲ್, ಜೈನ ಸಮಾಜದ ಮುಖಂಡರಾದ ಉದಯಕುಮಾರ, ಪಂಚಾಯ್ತಿ ಸದಸ್ಯ ಹೇಮಂತ ಗಾಂವ್ಕರ್, ಎಂ.ಸಿ. ನಾಯ್ಕ ಉಪಸ್ಥಿತರಿದ್ದರು. ಉಪ ತಹಶೀಲ್ದಾರ್ ಯಶೋಧಾ ಲಕ್ಕುಮನೆ ಸ್ವಾಗತಿಸಿದರು.