ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗದ ಭಾರ ನಿಮ್ಮ ಮೇಲಿಲ್ಲ’

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹಾಸ್ಯ ನಮಗೆ ಏಕೆ ಬೇಕು, ಅದರ ಅಗತ್ಯವೇನು?
ಚಿಂತೆಯನ್ನು ಮರೆಯಲು ಹಾಸ್ಯವೇ ಪ್ರಧಾನ ಔಷಧಿ. ಮನಸು ನಿರಾಳವಾಗಬೇಕಾದರೆ ಕಾಮಿಡಿ ಇರಲೇಬೇಕು. ಕಾಮಿಡಿ ಮನಸ್ಥಿತಿ ರೂಢಿಸಿಕೊಂಡವರು ಯಾವುದೇ ಕಾಯಿಲೆಗಳಿಲ್ಲದೇ ಬದುಕಿದ್ದಾರೆ ಎನ್ನುವುದು ನಮ್ಮ ಅಚಲವಾದ ನಂಬಿಕೆ. ಹಾಸ್ಯವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ನಗುವುದರಿಂದ ದೇಹ ಸಡಿಲವಾಗುತ್ತದೆ. ಕಾಯಿಲೆಗಳು ದೂರ ಓಡುತ್ತವೆ. ಸಣ್ಣ ವಿಚಾರಗಳಲ್ಲೂ ಖುಷಿ ಹುಡುಕಿಕೊಳ್ಳಬೇಕು.

ಮೂರ್ಖರ ದಿನದ ಮಹತ್ವ ಏನು?
ವಾಸ್ತವದಲ್ಲಿ ನಗುವುದಕ್ಕೆ ಕಾರಣವೇ ಬೇಡ. ಮೂರ್ಖರ ದಿನ ಎಂದು ನಾವು ಒಂದು ನಿರ್ದಿಷ್ಟ ದಿನವನ್ನೇಕೆ ಮೀಸಲಿಡಬೇಕು. ಬನ್ನಿ ಮೂರ್ಖರ ವರ್ಷವನ್ನೇ ಆಚರಿಸೋಣ. ಮೂರ್ಖರ ದಿನ ಸಂತೋಷಕ್ಕೆ ಉಪಮೆ. ಬನ್ನಿ ನೋವನ್ನು ಮರೆಯುವ, ಉತ್ಸಾಹವನ್ನು ಬಿತ್ತುವ ಕೆಲಸ ಮಾಡೋಣ.

ಒತ್ತಡದ ಕಾಲದಲ್ಲಿ ಲಘು ಬದುಕು ಸಾಧ್ಯವೇ?
ಹಾಸ್ಯ ಒಂದರಿಂದಲೇ ಒತ್ತಡ ಕಡಿಮೆಯಾಗದು. ಮೊದಲು ಸಂತೋಷವಾಗಿ ಬದುಕುವುದನ್ನು ಕಲಿಯಿರಿ. ಎಲ್ಲರಲ್ಲೂ ಒಳ್ಳೆಯದನ್ನು ಗುರುತಿಸಬೇಕು. ಆಗ ಸಂತೋಷ ಉಕ್ಕಿ ಬರುತ್ತದೆ. ತನಗೆ ತಾನೇ ಬೇಸರ ಕಡಿಮೆಯಾಗಿ, ಒತ್ತಡವೂ ಜಾರಿಹೋಗುತ್ತದೆ. ನಾನೊಬ್ಬನೇ ಕಷ್ಟಪಟ್ಟೆ, ನನ್ನಿಂದಲೇ ಸಮಾಜ ನಡೆಯುತ್ತಿದೆ ಎಂದೆಲ್ಲಾ ಯೋಚಿಸಲೇಬಾರದು. ಸಮಾಜದಲ್ಲಿ ನಾನೂ ಒಬ್ಬ ಎಂಬ ಭಾವನೆ ಇರಬೇಕು. ನಾವು ಇಲ್ಲಿ ನಿಮಿತ್ತ ಮಾತ್ರ. ಸಂತೋಷದ ಬದುಕಿಗೆ 5 ರೂಪಾಯಿಯೂ ಸಾಕು; 5 ಕೋಟಿ ರೂಪಾಯಿಯೇ ಬೇಕೆಂದೇನೂ ಇಲ್ಲ. ಇನ್ನೊಬ್ಬರು ಚೆನ್ನಾಗಿರುವುದನ್ನು ಕಂಡು ಸಂತೋಷ ಪಡಬೇಕು.

ವೃತ್ತಿ ಸ್ಥಳದಲ್ಲಿ ಹಾಸ್ಯದ ಪ್ರತಿಷ್ಠಾಪನೆ ಹೇಗೆ?
ನಮ್ಮ ಆಯಸ್ಸಿನ ಬಹುಪಾಲು ಕಚೇರಿಗಳಲ್ಲಿಯೇ ಕಳೆಯುತ್ತೇವೆ. ಬಹುತೇಕರು ಅವನು ಕಾರು ತಗೊಂಡ, ನಾನು ಯಾವಾಗ ತೆಗೆದುಕೊಳ್ಳಲಿ ಎಂಬಿತ್ಯಾದಿ ಕನಸುಗಳನ್ನು ಕಟ್ಟಿಕೊಂಡು ಕಾಲ ದೂಡುತ್ತಿರುತ್ತಾರೆ. ಜತೆಗೆ ಹೊಟ್ಟೆ ಉರಿ. ಈ ಚಿಂತೆಯಲ್ಲೇ ಇದ್ದರೆ ಹಾಸ್ಯ ಬರಲು ಹೇಗೆ ಸಾಧ್ಯ? ಇವೆಲ್ಲ ಎಲ್ಲ ಕ್ಷೇತ್ರಗಳಲ್ಲೂ ಇವೆ. ಪರಸ್ಪರ ನಂಬಿಕೆ ಇರಬೇಕು; ಎಲ್ಲರೂ ಸಂತೋಷವಾಗಿ ಇರಲು ಕಲಿಯಬೇಕು.

ನೀವು ಹಾಸ್ಯವನ್ನು ಹೇಗೆ ಅಳವಡಿಸಿಕೊಂಡಿರಿ?
ನನ್ನ ಶ್ರಮವೇನೂ ಇಲ್ಲ. ನನಗೆ ಒಳ್ಳೆಯ ಗಮನಿಸುವಿಕೆಯಿದೆ. ಅದು ನನ್ನ ಶಕ್ತಿ. ‘ನಾನು ಕೆಲಕಾಲ ಮಾತನಾಡಿದರೆ, ಕೇಳುವವರು ಚಿಂತೆ ಮರೆಯಬೇಕು’ ಎಂಬ ಆಸೆ ನನ್ನದು. ಹಾಸ್ಯ ಎಲ್ಲರಲ್ಲೂ ಇರುತ್ತದೆ. ಅದನ್ನು ಎಲ್ಲರೂ ಒಪ್ಪುವುದಿಲ್ಲ. ನಮ್ಮಲ್ಲಿರುವ ಹಾಸ್ಯವನ್ನು ಇತರರಿಗೂ ಹಂಚಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT