ಬೆಂಗಳೂರು: ‘2019ರ ಲೋಕಸಭೆ ಚುನಾವಣೆಗೆ ಕರ್ನಾಟಕದ ವಿಧಾನಸಭೆ ಚುನಾವಣೆ ಸೆಮಿಫೈನಲ್ ಇದ್ದಂತೆ, ಇಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ’ ಎಂದು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಹೇಳಿದರು.
‘ಇದಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದೇನೆ. ಕಾಂಗ್ರೆಸ್ ಜೊತೆ ಸೇರಬೇಕೋ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೋ ಎಂಬುದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಎರಡು ದಿನ ಇಲ್ಲೇ ಇದ್ದು ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನ ಪ್ರಕಟಿಸುತ್ತೇನೆ’ ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಕರ್ನಾಟಕದ ಚುನಾವಣೆಯಲ್ಲಿ ದೇಶದ ಜನರೆಲ್ಲರೂ ಮತದಾನ ಮಾಡುವುದಿಲ್ಲ. ಆದರೆ, ಇಲ್ಲಿನ ಫಲಿತಾಂಶದ ಬಗ್ಗೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಬಿಜೆಪಿ ಮುಕ್ತ ಭಾರತ ನಿರ್ಮಾಣವಾಗಬೇಕಿದೆ. ಆ ಪಕ್ಷವನ್ನು ಸೋಲಿಸುವ ಶಕ್ತಿ ಯಾವ ಪಕ್ಷಕ್ಕಿದೆ ಎಂಬುದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ’ ಎಂದರು.
‘ಕರ್ನಾಟಕದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ನಮ್ಮ ಪಕ್ಷದವರು’ ಎಂದು ಹೇಳಿದರು.
ಜೆಡಿಯು ಪಕ್ಷ ಯಾರಿಗೆ ಸೇರಿದ್ದು ಎಂಬುದು ನ್ಯಾಯಾಲಯದಲ್ಲಿದ್ದು, ಸೋಮವಾರ ತೀರ್ಪು ಪ್ರಕಟವಾಗಲಿದೆ. ಬಳಿಕ ಹೊಸ ಚಿಹ್ನೆಯಡಿ ಪಕ್ಷ ಸಂಘಟನೆಗೆ ಕರ್ನಾಟಕದಲ್ಲೇ ಚಾಲನೆ ನೀಡಲಾಗುವುದು ಎಂದರು.