ಕುಷ್ಟಗಿ: ಅಹಂ ತೊರೆದರೆ ಹಿಂಸೆ ಇರುವುದಿಲ್ಲ. ಹಿಂಸೆಯನ್ನು ತ್ಯಜಿಸುವುದು ಭಗವಾನ್ ಮಹಾವೀರರ ಸಂದೇಶವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ ಬಾಗಮಾರ ಹೇಳಿದರು.ಪಟ್ಟಣದಲ್ಲಿ ಜೈನ ಸಮುದಾಯದಿಂದ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕೊನೆಯ ತೀರ್ಥಕಂರರಾಗಿದ್ದ ಮಹಾವೀರರು ಮನುಕುಲದ ಒಳಿತಿಗಾಗಿ ಸಂದೇಶಗಳನ್ನು ನೀಡಿದ್ದಾರೆ ಎಂದರು.ರಾಗದ್ವೇಷಗಳನ್ನು ಗೆದ್ದವರು ನಿಜವಾದ ಜೈನ ಎನಿಸಿಕೊಳ್ಳುತ್ತಾರೆ. ಅಹಿಂಸಾ ಪರಮೋಧರ್ಮಃ ಎಂದು ಮಹಾವೀರರು ಹೇಳಿದ್ದನ್ನು ದೈನಂದಿನ ಬದುಕಿನಲ್ಲಿ ಪಾಲಿಸಬೇಕು, ನೀನು ಬಾಳು ಇತರರನ್ನೂ ಬಾಳಲು ಬಿಡು ಎಂಬಂತೆ ಜೈನಧರ್ಮ ಇತರರ ಒಳಿತನ್ನು ಬಯಸುತ್ತದೆ ಎಂದರು.
ತಂದೆ ತಾಯಿಗಳ ಸೇವೆಯೇ ದೇವರ ಸೇವೆ, ದೇವರು ತಾನೇ ಸೃಷ್ಟಿಸಿದ ಜೀವಿಗಳನ್ನು ಬಲಿ ಕೇಳುವುದಿಲ್ಲ. ಆದರೆ, ಸಮಾಜದಲ್ಲಿ ಅಂಧಶ್ರದ್ಧೆಯಿಂದ ಪ್ರಾಣಿಬಲಿ ಪದ್ಧತಿ ಮುಂದುವರೆದಿದೆ. ಇಂಥ ಮನೋಭಾವನೆಗಳು ಬದಲಾಗಬೇಕು. ಜನರಲ್ಲಿ ವೈಚಾರಿಕ ಪ್ರಜ್ಞೆ ಹೆಚ್ಚಿದರೆ ಸಮಾಜದಲ್ಲಿ ಸಹಜವಾಗಿ ಶಾಂತಿ, ಸಮಾಧಾನ ನೆಲೆಸುತ್ತದೆ ಎಂದು ಹೇಳಿದರು. ಗುಪ್ತನಂದಿಜಿ ಗುರು ಆಶೀರ್ವಚನ ನೀಡಿದರು. ಮಾತಾಜಿ ಆರ್ಯಿಕಾ ಅಸ್ತಾಶ್ರೀ, ಸುಧರ್ಮ ಗುಪ್ತಜಿ, ಶ್ರವಣಗುಪ್ತ ಮಹಾರಾಜ ಉಪಸ್ಥಿತರಿದ್ದರು. ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಬಸವರಾಜ ಕಂಬಳಿ ಉಪನ್ಯಾಸ ನೀಡಿದರು. ಪ್ರಭಾವತಿ ಹಳ್ಳೂರು, ಡಾ.ಕೆ.ಶರಣಪ್ಪ ನಿಡಶೇಸಿ ಇದ್ದರು. ಜೈನ ಸಮುದಾಯದ ಮುಖಂಡ ಅಭಿನಂದನ ಗೋಗಿ ಅಧ್ಯಕ್ಷತೆ ವಹಿಸಿದ್ದರು.ಭಗವಾನ್ ಮಹಾವೀರ ಭಾವಚಿತ್ರದ ಮೆರವಣಿಗೆಗೆ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಚಾಲನೆ ನೀಡಿದರು.