ಬೆಂಗಳೂರು: ‘ಕಾಂಗ್ರೆಸ್ನಲ್ಲಿ ಈಗ ಹೈಕಮಾಂಡ್ ಇಲ್ಲ, ದುಡ್ಡಿದ್ದವರದ್ದೇ ಕಮಾಂಡ್’ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿ.ಕೆ. ಜಾಫರ್ ಷರೀಫ್ ಕಿಡಿ ಕಾರಿದರು.
‘ಗುತ್ತಿಗೆದಾರರು ಕಾಂಗ್ರೆಸ್ ಟಿಕೆಟ್ ಹಂಚಿಕೆ ನಿರ್ಧರಿಸುತ್ತಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯಿಲಿ ಟ್ವೀಟ್ ಮಾಡಿದ್ದು ಪಕ್ಷದಲ್ಲಿ ಸಂಚಲನ ಉಂಟು ಮಾಡಿತ್ತು. ಪರ–ವಿರೋಧದ ಚರ್ಚೆಗಳಿಗೂ ಇದು ಗ್ರಾಸ ಒದಗಿಸಿತ್ತು. ಈ ಗದ್ದಲ ತಣ್ಣಗಾಗುವ ಮೊದಲೇ, ಷರೀಫ್ ಅವರು ಗುಡುಗಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಷರೀಫ್, ‘ಕಾಂಗ್ರೆಸ್ ಸಂಸ್ಕೃತಿ ಗೊತ್ತಿಲ್ಲದವರ ಬಳಿ ರಾಜ್ಯದ ಅಧಿಕಾರ ಇದೆ’ ಎಂದೂ ಹರಿಹಾಯ್ದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಾನೇ ಎನ್ನುವ ಅಹಂ ಇದೆ. ನನ್ನ ಮೊಮ್ಮಗನಿಗೆ ಟಿಕೆಟ್ ಕೊಡುತ್ತಾರೆ ಎಂಬ ನಂಬಿಕೆ ಇಲ್ಲ. ಈವರೆಗೆ ಯಾರೂ ನಮ್ಮನ್ನು ಮಾತನಾಡಿಸಿಲ್ಲ. ಎಲ್ಲರೂ ಕಡೆಗಣಿಸಿದ್ದಾರೆ’ ಎಂದು ಅಸಮಾಧಾನ ಹೊರ ಹಾಕಿದರು.
‘ಹೊಸಕೋಟೆಯಲ್ಲಿ ಎಂ.ಟಿ.ಬಿ. ನಾಗರಾಜ್, ಕೆ.ಆರ್.ಪುರದಲ್ಲಿ ಬೈರತಿ ಬಸವರಾಜು, ಹೆಬ್ಬಾಳದಲ್ಲಿ ಬೈರತಿ ಸುರೇಶ್, ಕೋಲಾರದಲ್ಲಿ ವರ್ತೂರು ಪ್ರಕಾಶ್ ಹೀಗೆ ಅವರ(ಸಿದ್ದರಾಮಯ್ಯ) ಸಮುದಾಯದವರಿಗೆ ಎಲ್ಲಾ ಕಡೆ ಟಿಕೆಟ್ ಕೊಟ್ಟರೆ ಬೇರೆಯವರ ಗತಿ ಏನು’ ಎಂದು ಅವರು ಕಟುವಾಗಿ
ಪ್ರಶ್ನಿಸಿದರು.
‘ಕಾಂಗ್ರೆಸ್ ಬಗ್ಗೆ ಒಲವಿರುವವರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುತ್ತಿದ್ದಾರೆ. ಇಲ್ಲದವರು ಕಾಂಗ್ರೆಸ್ ಸೋಲುತ್ತದೆ ಎನ್ನುತ್ತಿದ್ದಾರೆ. ಒಟ್ಟಾರೆ ಎಲ್ಲವೂ ಗೊಂದಲ ಮಯವಾಗಿದೆ. ಸರ್ಕಾರ ಮತ್ತು ಧರ್ಮ ಬೇರೆ ಬೇರೆ. ಯಾವುದೇ ಸರ್ಕಾರ ಧರ್ಮದ ವಿಚಾರಕ್ಕೆ ಕೈ ಹಾಕಬಾರದು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ನಡೆ ಸರಿಯಲ್ಲ’ ಎಂದು ಅವರು ಹೇಳಿದರು.