ಭುವನೇಶ್ವರ (ಪಿಟಿಐ): ಉದಾಂತ ಹಾಗೂ ಮಿಕು ಅವರು ಗಳಿಸಿದ ತಲಾ ಒಂದು ಗೋಲಿನ ಬಲದಿಂದ ಬೆಂಗಳೂರು ಎಫ್ಸಿ ತಂಡ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾನುವಾರ ಗೋಕುಲಮ್ ಕೇರಳ ಎಫ್ಸಿ ತಂಡಕ್ಕೆ ಸೋಲುಣಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ.
ಹೆರ್ನಿ ಕಿಸೆಕ್ 33ನೇ ನಿಮಿಷದಲ್ಲಿ ಗೋಕುಲಮ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಬಿಎಫ್ಸಿ ತಂಡದ ಮಿಕು 33ನೇ ನಿಮಿಷದಲ್ಲಿ ಸಮಬಲ ಸಾಧಿಸಿದರು. ಪಂದ್ಯದ ಕೊನೆಯ ನಿಮಿಷಗಳಲ್ಲಿ ಬಿಎಫ್ಸಿ ವೇಗ ಹೆಚ್ಚಿಸಿಕೊಂಡು ಆಡಿತು. 90ನೇ ನಿಮಿಷದಲ್ಲಿ ಉದಾಂತ ಗೋಲು ಗಳಿಸಿ ಬೆಂಗಳೂರು ತಂಡದ ಜಯದ ರೂವಾರಿ ಯಾದರು.
ಮೊದಲರ್ಧದಲ್ಲಿ ಗೋಕುಲಮ್ ತಂಡ ಮಿಂಚಿತು. ಆದರೆ ಬಿಎಫ್ಸಿ 11ನೇ ನಿಮಿಷದಲ್ಲಿ ಸಿಕ್ಕ ಸುಲಭ ಅವಕಾಶವನ್ನು ಕೈಚೆಲ್ಲಿತು. ಸುನಿಲ್ ಚೆಟ್ರಿ ಚೆಂಡನ್ನು ಗುರಿ ಸೇರಿಸುವಲ್ಲಿ ವಿಫಲರಾಗಿದ್ದರು. ಕೇರಳ ತಂಡದ ಗೋಲ್ಕೀಪರ್ ನಿಖಿಲ್ ಬರ್ನಾಡ್ ಅಮೋಘವಾಗಿ ಚೆಂಡನ್ನು ತಡೆದು ಮಿಂಚಿದರು.
ಬೆಂಗಳೂರು ತಂಡದ ರಕ್ಷಣಾ ಪಡೆಯನ್ನು ದಾಟಲು ಗೋಕುಲಮ್ ತಂಡ ಕೊನೆಯ ನಿಮಿಷಗಳಲ್ಲಿ ಸಾಕಷ್ಟು ಪ್ರಯತ್ನ ಮಾಡಿತು. ಆದರೆ ಬಿಎಫ್ಸಿ ತಂಡದ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.
50ನೇ ನಿಮಿಷದಲ್ಲಿ ಬಿಎಫ್ಸಿಗೆ ಸಿಕ್ಕ ಅವಕಾಶವನ್ನು ಸುಭಾಶಿಸ್ ಬೋಸ್ ಕೈ ಚೆಲ್ಲಿದರು.