ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳ ಪರ ನಿಂತಿದ್ದಾರೆಯೇ ಹೊರತು ಕೃಷಿಕರ ಪರ ಅಲ್ಲ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಮೋದಿ ರಾಜ್ಯದಲ್ಲಿ ಕಣ್ಣೀರು ಸುರಿಸುವುದು ಬೇಡ. ಅವರು ಮಹಾರಾಷ್ಟ್ರದಲ್ಲಿ ಕಣ್ಣೀರು ಸುರಿಸಲಿ’ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.
‘ಅಮಿತ್ ಶಾ, ಮೋದಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ನಾವು ರಾಜ್ಯದಲ್ಲಿ ಸಹಕಾರ ಸಂಘಗಳಲ್ಲಿದ್ದ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಇರುವ ಸಾಲವನ್ನು ಮನ್ನಾ ಮಾಡುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಚಕಾರ ಎತ್ತುತ್ತಿಲ್ಲ. ಬಿಜೆಪಿಯವರು ಕೇವಲ ಚುನಾವಣೆಗಾಗಿ ರೈತರ ಬಗ್ಗೆ ಮಾತನಾಡ್ತಿದ್ದಾರೆ’ ಎಂದು ಆರೋಪಿಸಿದರು.
ಕಾಂಗ್ರೆಸ್ನಿಂದ ಚುನಾವಣಾ ತಂತ್ರ
ರಾಜ್ಯದಲ್ಲಿ ನೆಲೆಸಿರುವ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷಿಕರ ಮೇಲೆ ಕಾಂಗ್ರೆಸ್ ಗಮನಹರಿಸಿದೆ.
ಮಲಯಾಳಂ ಮತದಾರರನ್ನು ಸೆಳೆಯಲು ಕೇರಳ ಮುಖಂಡರ ನೇತೃತ್ವದಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ತಂಡ ರಚಿಸಿದ್ದಾರೆ.
ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.