ಮೈಸೂರು: ಮಾನ್ಯತೆಯಿಲ್ಲದೆ ಹೈರಾಣಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2018–19ಕ್ಕೆ ಸಾಲಿಗೆ ಮಾನ್ಯತೆ ಕೋರಿ ಮತ್ತೆ ಯುಜಿಸಿ ಕದ ತಟ್ಟಬೇಕಿದೆ.ಇದೇ ಸಾಲಿಗೆ ಕೆಎಸ್ಒಯು 2017ರ ಅ.4ರಲ್ಲೇ ಅರ್ಜಿ ಸಲ್ಲಿಸಿತ್ತು. ಆದರೆ, ಯುಜಿಸಿ ನಿಯಮಾವಳಿಗಳಿಗೆ ತಿದ್ದುಪಡಿ ತಂದ ಕಾರಣ, ಈಗ ಮರಳಿ ಅರ್ಜಿ ಸಲ್ಲಿಸಬೇಕಿದೆ. ಇದು ಕೇವಲ ಕೆಎಸ್ಒಯುಗೆ ಅನ್ವಯಿಸುವಂಥದ್ದಲ್ಲ. ದೂರಶಿಕ್ಷಣ ನೀಡುವ ದೇಶದ ಎಲ್ಲ ವಿ.ವಿ.ಗಳೂ ಹೊಸತಾಗಿ ಅರ್ಜಿ ಸಲ್ಲಿಸಬೇಕಿದೆ.ಯುಜಿಸಿಯ 2017ರ ನಿಯಮಾವಳಿ ಅನುಸಾರವಾಗಿ ಕಳೆದ ವರ್ಷವೇ ಕೆಎಸ್ಒಯು ಸಿದ್ಧತೆನಡೆಸಿತ್ತು. ಒಟ್ಟು 35 ಕೋರ್ಸ್ಗಳಿಗೆ ‘ಯೋಜನಾ ಪ್ರಸ್ತಾವ ವರದಿ’ (ಪಿಪಿಆರ್) ಹಾಗೂ ವಿವಿಧ ಶುಲ್ಕ ಸ್ವೀಕಾರಕ್ಕೆ ಸಂಬಂಧಿಸಿದಂತೆ ನಿಯಮಾವಳಿ ರೂಪಿಸಿ ಒಪ್ಪಿಗೆ ಪಡೆಯಲಾಗಿತ್ತು.