ನವದೆಹಲಿ: ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಇಎಸ್ಪಿನ್ನ ವರ್ಷದ ಅತ್ಯುತ್ತಮ ಕ್ರೀಡಾಪಟುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಉತ್ತಮ ಕೋಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುರುಷರ ವಿಭಾಗದ ಪ್ರಶಸ್ತಿಗೆ ಆಯ್ಕೆಯಾದ ಶ್ರೀಕಾಂತ್ ಈ ವರ್ಷ ಒಟ್ಟು ನಾಲ್ಕು ಸೂಪರ್ ಸೀರಿಸ್ ಪ್ರಶಸ್ತಿಗಳನ್ನು ಗೆದ್ದಿದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ನಾಲ್ಕನೇ ಆಟಗಾರ ಎಂದೆನಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದ ಪ್ರಶಸ್ತಿಗೆ ಭಾಜನರಾಗಿರುವ ಸಿಂಧು ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ನಂತರ ಉತ್ತಮ ಲಯದಲ್ಲಿ ಮುಂದುವರಿದಿದ್ದಾರೆ. ಈ ವರ್ಷ ಇಂಡಿಯನ್ ಮತ್ತು ಕೊರಿಯನ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾರತ ಮಹಿಳಾ ಹಾಕಿ ತಂಡವನ್ನು ವರ್ಷದ ತಂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 13 ವರ್ಷಗಳ ನಂತರ ಏಷ್ಯಾ ಕಪ್ ಗೆದ್ದ ಸಾಧನೆಗೆ ಈ ಗೌರವ ಸಂದಿದೆ.
ವರ್ಷದ ಸಾಧಕ ಪ್ರಶಸ್ತಿಗೆ ಸಾರ್ವಜ ನಿಕರಿಂದ ಅಭಿಪ್ರಾಯ ಪಡೆಯಲಾಗಿತ್ತು. 17 ವರ್ಷದೊಳಗಿನವರ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ದೇಶದ ಮೊತ್ತಮೊದಲ ಗೋಲು ಗಳಿಸಿದ ಜೀಕ್ಸನ್ ಸಿಂಗ್ಗೆ ಈ ಪ್ರಶಸ್ತಿ ಲಭಿಸಲಿದೆ.
ಅಭಿನವ್ ಬಿಂದ್ರಾ, ಸೋಮದೇವ್ ದೇವವರ್ಮನ್, ಬೈಚುಂಗ್ ಭುಟಿಯಾ, ರೋಹಿತ್ ಬ್ರಿಜ್ನಾಥ್, ವೆಂಕಟೇಶನ್ ದೇವರಾಜನ್, ನಿಶಾ ಮಿಲೆಟ್, ಅಪರ್ಣಾ ಪೋಪಟ್, ಜಗದೀಶ್ ಕಾಲಿರಾಮನ್, ಮನೀಷ ಮಲ್ಹೋತ್ರ ಹಾಗೂ ಅಂಜು ಬಾಬಿ ಜಾರ್ಜ್ ಅವರು ಆಯ್ಕೆ ಸಮಿತಿಯಲ್ಲಿದ್ದರು.