ನವದೆಹಲಿ: ಎಸ್ಸಿ, ಎಸ್ಟಿ ಕಾಯ್ದೆಗೆ ಸಂಬಂಧಿಸಿ ಇತ್ತೀಚೆಗೆ ನೀಡಿದ ತೀರ್ಪನ್ನು ಅಮಾನತಿನಲ್ಲಿಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಕಾಯ್ದೆ ನಿಯಮಗಳಲ್ಲಿನ ಬದಲಾವಣೆ ಸಂಬಂಧ ಎರಡು ದಿನಗಳಲ್ಲಿ ವರದಿ ನೀಡುವಂತೆ ಕೇಳಿರುವ ಸುಪ್ರೀಂ ಕೋರ್ಟ್, ತುರ್ತು ಮನವಿ ಸಂಬಂಧ 10 ದಿನಗಳ ಬಳಿಕ ವಿಚಾರಣೆ ನಡೆಸುವುದಾಗಿ ಹೇಳಿರುವ ಕೋರ್ಟ್, ಎರಡು ದಿನಗಳಲ್ಲಿ ಕಕ್ಷೀದಾರರು ಹೇಳಿಕೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಎಸ್ಸಿ, ಎಸ್ಟಿ ಕಾಯ್ದೆಗೆ ಸಂಬಂಧಿಸಿ ಇತ್ತೀಚೆಗೆ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸೋಮವಾರ ಅರ್ಜಿ ಸಲ್ಲಿಸಿತ್ತು. ತುರ್ತು ವಿಚಾರಣೆ ನಡೆಸಿದ ಕೋರ್ಟ್ ಮಾ.20ರಂದು ನೀಡಿದ್ದ ತನ್ನ ತೀರ್ಪಿಗೆ ತಡೆ ನೀಡಲು ನಿರಾಕರಿಸಿದೆ.
ಮಾರ್ಚ್ 20ರಂದು ನೀಡಿದ ತೀರ್ಪು ಸಂವಿಧಾನದ 21ನೇ ಕಲಂನ ಉಲ್ಲಂಘನೆಯಾಗಿದೆ. ಹಾಗಾಗಿ ಕಾಯ್ದೆಯಲ್ಲಿ ಇರುವ ಎಲ್ಲ ಅಂಶಗಳನ್ನು ಮರುಸ್ಥಾಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ‘ಭಾರತ ಬಂದ್’ ಹಿಂಸಾಚಾರಕ್ಕೆ ತಿರುಗಿ 9 ಮಂದಿ ಬಲಿಯಾದರು ಹಾಗೂ ನೂರಾರು ಜನ ಗಾಯಗೊಂಡರು.