ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿ ಪೂಜಕರಲ್ಲ...

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ‘ವೀರಶೈವರು ಮೂರ್ತಿ ಆರಾಧಕರು, ಲಿಂಗಾಯತರು ಇಷ್ಟಲಿಂಗ ಆರಾಧಕರು’ (ಪ್ರ.ವಾ., ಏ.2) ಎಂಬ ಹೇಳಿಕೆ ನೀಡಿದ್ದಾರೆ.

ವೀರಶೈವ-ಲಿಂಗಾಯತ ಕುರಿತ ವಾದ-ವಿವಾದ ಆರಂಭವಾದಾಗಿನಿಂದಲೂ ಪೇಜಾವರ ಸ್ವಾಮೀಜಿ ‘ವೀರಶೈವ, ಲಿಂಗಾಯತ ಬೇರೆ ಬೇರೆ ಅಲ್ಲ, ಅವು ಹಿಂದೂ ಧರ್ಮದ ಭಾಗ. ವೀರಶೈವರು ಮತ್ತು ಲಿಂಗಾಯತರು ಹಿಂದೂ ಧರ್ಮದಿಂದ ಬೇರೆಯಾಗಬಾರದು’ ಎಂದು ಪ್ರತಿಪಾದಿಸುತ್ತಲೇ ಬಂದಿರುವುದು ಪ್ರಶಂಸನೀಯ.

ಪೇಜಾವರ ಶ್ರೀಗಳು ಪ್ರತಿಪಾದಿಸುವ ಹಾಗೆ ವೀರಶೈವ–ಲಿಂಗಾಯತರು ಶಿವನ ಆರಾಧಕರಾಗಿದ್ದಾರೆ ಎಂಬುದು ನಿಜ. ಅವರು ನಿರಾಕಾರ ಶಿವನನ್ನು ಇಷ್ಟಲಿಂಗರೂಪದಲ್ಲಿ
ಎಡಹಸ್ತದಲ್ಲಿಟ್ಟು ಪ್ರತಿನಿತ್ಯ ಆರಾಧಿಸುವವರಾಗಿದ್ದಾರೆ. ಆದರೆ ‘ವೀರಶೈವರು ಮೂರ್ತಿ ಆರಾಧಕರು, ಲಿಂಗಾಯತರು ಇಷ್ಟಲಿಂಗ ಆರಾಧಕರು’ ಎಂಬುದು ವೀರಶೈವ–
ಲಿಂಗಾಯತ ತತ್ತ್ವಸಿದ್ಧಾಂತಕ್ಕೆ ವಿರುದ್ಧವಾದುದು. ಈ ಹೇಳಿಕೆಯಿಂದಾಗಿ ಸ್ವತಃ ಸ್ವಾಮೀಜಿಯೇ ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂದು ಪ್ರತಿಪಾದಿಸಿದ ಹಾಗಾಗುತ್ತದೆ.

ವೀರಶೈವ– ಲಿಂಗಾಯತ ಬೇರೆ ಬೇರೆ ಅಲ್ಲ. ವೀರಶೈವ ಎಂಬುದು ಧರ್ಮವಾಚಕವಾದರೆ ಲಿಂಗಾಯತ ಎಂಬುದು ಇಷ್ಟಲಿಂಗ ಪೂಜಾ ಆಚರಣೆಯನ್ನು ಹೇಳುವ ಪದವಾಗಿದೆ. ಲಿಂಗಾಯತ ಎಂದರೆ ಗುರುವಿನಿಂದ ಇಷ್ಟಲಿಂಗವನ್ನು ಆಯತ್ತ (ಪಡೆದುಕೊಳ್ಳುವುದು) ಮಾಡಿಕೊಳ್ಳುವುದು ಎಂದು ಅರ್ಥ. ‘ನಗರವಾಸಿಗಳು ವೀರಶೈವ ಪದ ಬಳಸುತ್ತಾರೆ, ಗ್ರಾಮೀಣ ಪ್ರದೇಶದಲ್ಲಿ ಲಿಂಗಾಯತ ಪದ ಬಳಕೆಯಲ್ಲಿದೆ. ಆದರೆ ಎರಡೂ ಒಂದೇ’ ಎಂಬ ಅಭಿಪ್ರಯವನ್ನು ಸಿದ್ಧಗಂಗೆಯ ಹಿರಿಯ ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ.

ವೀರಶೈವ ಲಿಂಗಾಯತರು ಮೂರ್ತಿ ಆರಾಧಕರಲ್ಲ. ಅವರು ಇಷ್ಟಲಿಂಗ ಪೂಜಕರಾದರೂ ಸುತ್ತಮುತ್ತಲಿನವರ ಪ್ರಭಾವದಿಂದ ದೇವರ ಮೂರ್ತಿಗಳಿಗೆ ಗೌರವ ಕೊಡುವುದು, ಅವುಗಳಲ್ಲಿಯೂ ಭಕ್ತಿಯನ್ನು ತೋರಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ವೀರಶೈವ ಲಿಂಗಾಯತ ಸಿದ್ಧಾಂತದಲ್ಲಿ ಎಲ್ಲಿಯೂ ಮೂರ್ತಿ ಪೂಜೆಯನ್ನು ಹೇಳಿಲ್ಲ. ವೀರಶೈವ ಧರ್ಮಗ್ರಂಥ ‘ಸಿದ್ಧಾಂತ ಶಿಖಾಮಣಿ’ಯಲ್ಲಿ ‘ಸ್ಥಾವರ ದೇವರ ಪೂಜೆಯನ್ನು ನಿರಾಕರಿಸಬೇಕು ಮತ್ತು ಅಲ್ಲಿ ಕೊಡುವ ತೀರ್ಥ ಪ್ರಸಾದವನ್ನೂ ಸ್ವೀಕಾರ ಮಾಡಬಾರದು’ ಎಂದು ಕಟ್ಟುನಿಟ್ಟಿನ ನಿಯಮವಿದೆ. ಆದರೆ ಜನ ಈ ನಿಯಮವನ್ನು ಪಾಲಿಸುವುದಿಲ್ಲ.

ಸ್ಕಂದ ಪುರಾಣದ ಶಂಕರ ಸಂಹಿತೆಯಲ್ಲಿ ವ್ಯಾಸ ಮಹರ್ಷಿಗಳು ವೀರಶೈವ ಧರ್ಮ ಪದದ ವ್ಯಾಖ್ಯೆಯನ್ನು ಸುಂದರವಾಗಿ ನೀಡಿದ್ದಾರೆ. ‘ಶ್ರೀಗುರು ಕರುಣಿಸಿದ ಇಷ್ಟಲಿಂಗವನ್ನು ತನ್ನ ಎಡಹಸ್ತದಲ್ಲಿ ಇಟ್ಟುಕೊಂಡು, ಅದರಲ್ಲಿ ತನ್ನ ಮನಸ್ಸನ್ನು ಲೀನಗೊಳಿಸಿ ಬಹಿರಂಗದ ಎಲ್ಲ ಕಾರ್ಯಗಳನ್ನು ಮರೆತು ನಿತ್ಯದಲ್ಲಿ ಪೂಜಿಸುವವನೇ ವೀರಶೈವ’ ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ.

ಸಿದ್ಧಾಂತ ಶಿಖಾಮಣಿಯ 6ನೇ ಅಧ್ಯಾಯದ 58ನೇ ಶ್ಲೋಕದಲ್ಲಿ, ‘ವೇದ ಶಾಸ್ತ್ರ ಪುರಾಣಾಗಮಗಳಲ್ಲಿ ನಿರೂಪಿಸಿದ ಹಾಗೆ ವೀರಶವೈವರಿಗೆ ಇಷ್ಟಲಿಂಗಧಾರಣೆಯು ನಿಶ್ಚಯವಾಗಿದೆ. ಆದ್ದರಿಂದ ವೀರಶೈವ ಲಿಂಗಾಯತರ ಆರಾಧ್ಯ ದೈವ ಇಷ್ಟಲಿಂಗವೇ ಆಗಿದೆ. ಇವರು ಇಷ್ಟಲಿಂಗದ ಆರಾಧಕರಾಗಿದ್ದಾರೆ. ಆದರೆ ಇವರು ಮನೆದೇವರು ಮತ್ತು ಗ್ರಾಮದೇವರುಗಳನ್ನು ಗೌರವಿಸಿ ಭಕ್ತಿಯನ್ನು ಸಮರ್ಪಿಸುವುದು ರೂಢಿಯಲ್ಲಿದೆ’ ಎಂದಿದೆ. ವೀರಶೈವ ಧರ್ಮದಲ್ಲಿ ಅನೇಕ ಒಳಪಂಗಡಗಳಿದ್ದರೂ ಎಲ್ಲರೂ ಇಷ್ಟಲಿಂಗಾರಾಧಕರೇ ಆಗಿದ್ದಾರೆ.

ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT