ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ 1,500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಒಟ್ಟು ₹2.99 ಕೋಟಿ ಮೊತ್ತದ ವಿದ್ಯಾರ್ಥಿ ವೇತನವನ್ನು ಮೊದಲ ಹಂತದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ರೋಯಿಂಗ್ ಪಟು ಕೀರ್ತನಾ ಅವರನ್ನು ಸನ್ಮಾನಿಸಲಾಯಿತು.
‘ಶಿಕ್ಷಣ ಸಂಸ್ಥೆಯ ಸಹಕಾರದಿಂದ ನಾನು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಯಿತು’ ಎಂದು ಕೀರ್ತನಾ ಹೇಳಿದರು. ಪಿಇಎಸ್ ವಿಶ್ವ
ವಿದ್ಯಾಲಯದಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಕೀರ್ತನಾ ಅವರು ಕರ್ನಾಟಕಕ್ಕೆ ರೋಯಿಂಗ್ನಲ್ಲಿ ಅಂತರರಾಷ್ಟ್ರೀಯ ಪದಕ ತಂದುಕೊಟ್ಟ ಮೊದಲ ಯುವತಿ. ಅವರಿಗೆ ಕರ್ನಾಟಕ ಸರ್ಕಾರ ಇತ್ತೀಚೆಗೆ ‘ಏಕಲವ್ಯ’ ಪ್ರಶಸ್ತಿ ನೀಡಿ ಗೌರವಿಸಿತ್ತು.
ಗೇಟ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ರಾಹುಲ್ ಕಶ್ಯಪ್, ಎರಡನೇ ರ್ಯಾಂಕ್ ಗಳಿಸಿದ ಮನೋಜ್ ದೀಕ್ಷಿತ್ ಅವರಿಗೆ ಸಿ.ಎನ್.ಆರ್. ರಾವ್ ಹಾಗೂ ಎಂ.ಆರ್.ದೊರೆಸ್ವಾಮಿ ವಿದ್ಯಾರ್ಥಿವೇತನ ನೀಡಲಾಯಿತು.
‘ವಿದ್ಯಾರ್ಥಿ ವೇತನದಿಂದ ಕಾಲೇಜು ಶುಲ್ಕದಲ್ಲಿ ವಿನಾಯಿತಿ ಸಿಗಲಿದೆ. ಇದು ಮುಂದಿನ ಓದಿಗೆ ಸಹಾಯವಾಗುತ್ತದೆ’ ಎಂದು ಮನೋಜ್ ಹೇಳಿದರು.
‘ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಿವೆ. ಇದರಿಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಕೂಡ ಬದಲಾಗಿದೆ. ಇದನ್ನು ವಿದ್ಯಾರ್ಥಿಗಳು ಉತ್ತಮವಾಗಿ ಬಳಸಿಕೊಂಡು ಬೆಳೆಯಬೇಕು. ಕಡಿಮೆ ಅಂಕ ಬಂದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇರುವುದಿಲ್ಲ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ ಅವರ ‘ಶಿಕ್ಷಕ, ಚಿಂತಕ, ಸಾಧಕ’ ಮತ್ತು ‘ಎಂ.ಆರ್ ದೊರೆಸ್ವಾಮಿ–ಸದಸ್ಯರು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಚರ್ಚಿಸಿದ ನಡವಳಿಕೆಗಳು’ ಪುಸ್ತಕಗಳನ್ನು ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು.