ರಾಮನಗರ: ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿಯೇ ಸ್ಪರ್ಧಿಸುವಂತೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಸವಾಲು ಹಾಕಿದರು.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ರಾಮನಗರ, ಚನ್ನಪಟ್ಟಣ ಎರಡೂ ಕಡೆ ಸ್ಪರ್ಧೆಯಿಂದ ಸಮಯ, ಹಣ ವ್ಯರ್ಥವಾಗುತ್ತದೆ. ಬದಲಿಗೆ ನನ್ನ ಕ್ಷೇತ್ರದಲ್ಲಿಯೇ ಸ್ಪರ್ಧಿಸಿ. ನಾನು ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ನಿಮ್ಮ ವಿರುದ್ಧ ಗೆದ್ದು ತೋರಿಸುತ್ತೇನೆ’ ಎಂದರು.
‘ದೇವೇಗೌಡರು, ಕುಮಾರಸ್ವಾಮಿ ಸೇರಿಕೊಂಡು ರಾಜ್ಯದ ಒಕ್ಕಲಿಗ ನಾಯಕರೆಲ್ಲರನ್ನೂ ತುಳಿದಿದ್ದಾರೆ. ರಾಜ್ಯದ ಜನ ಇದನ್ನು ಭಾವನಾತ್ಮಕವಾಗಿ ಹೆದರಿಸುತ್ತಿದ್ದಾರೆ. ದೇವೇಗೌಡರು ತಮ್ಮ ಹಿರಿತನಕ್ಕೆ ತಕ್ಕಂತೆ ಮಾತನಾಡುವುದು ಒಳಿತು’ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ‘ಕುಮಾರಸ್ವಾಮಿ ಅವರ ಬೇನಾಮಿ ಆಸ್ತಿಗಳ ಪಟ್ಟಿ ದೊಡ್ಡದಿದೆ. ಮಲೇಷಿಯಾ, ಸಿಂಗಪುರದಲ್ಲಿಯೂ ಸಾಕಷ್ಟು ಆಸ್ತಿ ಹೊಂದಿದ್ದಾರೆ’ ಎಂದು ಆರೋಪಿಸಿದರು.
‘ಜೆಡಿಎಸ್ನ ಬಹುತೇಕ ನಾಯಕರು ಬಿಜೆಪಿ ಕದ ತಟ್ಟುತ್ತಿದ್ದಾರೆ. ಅವರ ಪಕ್ಷ ಮುಂದಿನ ಚುನಾವಣೆಯಲ್ಲಿ 22ರಿಂದ 25 ಸ್ಥಾನ ಗೆಲ್ಲಬಹುದು. ಈಗಲೇ ಯಾವುದಾದರೂ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಒಳಿತು’ ಎಂದು ಸಲಹೆ ನೀಡಿದರು.