ಹಾಸನ: ಬಾಗೂರು ಮಂಜೇಗೌಡ ₹500-700 ಕೋಟಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
‘ಮಂಜೇಗೌಡ ಅವರ ರಾಜೀನಾಮೆ ಅಂಗೀಕರಿಸಲು ರಾಜ್ಯ ಮುಖ್ಯಕಾರ್ಯದರ್ಶಿ ಹುನ್ನಾರ ಮಾಡುತ್ತಿದ್ದಾರೆ. ಇದಕ್ಕಾಗಿ ಒತ್ತಡ ಹಾಕುತ್ತಿದ್ದಾರೆ, ಮುಖ್ಯಕಾರ್ಯದರ್ಶಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮಂಜೇಗೌಡ ಕಳ್ಳ ಎಂದು ಸಾಬೀತಾಗಿದೆ’ ಎಂದು ಕಿಡಿಕಾರಿದರು.
ಮತದಾರರಿಗೆ ಬಾಡೂಟ ಹಾಕುತ್ತಿರುವ ಮಂಜೇಗೌಡ ವಿರುದ್ಧ ಕೂಡಲೇ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು. ಜೆಡಿಎಸ್ ಬಿಜೆಪಿಯ ಬಿ.ಟೀಂ ಅನ್ನುವ ರಾಹುಲ್ ಗಾಂಧಿಗೆ ಮಂಜೇಗೌಡನಂಥ ಕಳ್ಳರು ಬೇಕಾ ಎಂದು ಪ್ರಶ್ನಿಸಿದರು.
ಮಂಜೇಗೌಡ ರಾಜೀನಾಮೆ ಅಂಗೀಕಾರವಾದರೆ ಎಲ್ಲರ ವಿರುದ್ಧ ಕಾನೂನು ಹೋರಾಟದ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹಾಸನದಲ್ಲಿ ಡಿಸಿ ರೋಹಿಣಿ ನಿಷ್ಪಕ್ಷಪಾತ ಚುನಾವಣೆಗಾಗಿ ಕರ್ತವ್ಯ ಮಾಡುತ್ತಿದ್ದಾರೆ. ಆದರೆ ಅವರು ಕೆಲಸ ಮಾಡಲು ಕಾಂಗ್ರೆಸಿಗರು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.