ಮುಂಬೈ: ವಿಡಿಯೊಕಾನ್ ಸಮೂಹಕ್ಕೆ ಸಾಲ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ನ ಸಿಇಒ ಚಂದಾ ಕೊಚ್ಚರ್ ಅವರ ಭಾವ ರಾಜೀವ್ ಕೊಚ್ಚರ್ ಅವರನ್ನು ಸಿಬಿಐ ಮೂರನೇ ದಿನವೂ ವಿಚಾರಣೆ ನಡೆಸಿತು.
ಮುಂಬೈನ ಸಿಬಿಐ ಕಚೇರಿಗೆ ಶನಿವಾರ ಬೆಳಿಗ್ಗೆ ಹಾಜರಾಗಿದ್ದ ಸಂದರ್ಭದಲ್ಲಿ, ಸಾಲ ಮರುಹೊಂದಾಣಿ ಕೆಯಲ್ಲಿ ರಾಜೀವ್ ಅವರ ಕಂಪನಿ ವಹಿಸಿರುವ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.
ಐಸಿಐಸಿಐ ಬ್ಯಾಂಕ್ನಿಂದ ಸಾಲ ಕೊಡಿಸಲು ವಿಡಿಯೊಕಾನ್ ಸಮೂಹಕ್ಕೆ ನೆರವಾಗಿರುವ ಕುರಿತಾಗಿಯೂ ಸಿಬಿಐ ಅಧಿಕಾರಿಗಳು ಅವರನ್ನು ಪ್ರಶ್ನಿಸಿದರು.
ಸಿಂಗಪುರದ ಹಣಕಾಸು ಸೇವಾ ಸಂಸ್ಥೆ ಅವಿಸ್ತಾ ಅಡ್ವೈಸರಿಯ ಸ್ಥಾಪಕ ಮತ್ತು ಸಿಇಒ ಆಗಿರುವ ರಾಜೀವ್ ಕೊಚ್ಚರ್ ಅವರನ್ನು ಮುಂಬೈ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಗುರುವಾರ ವಶಕ್ಕೆ ಪಡೆಯಲಾಗಿತ್ತು. ಆ ಬಳಿಕ ಅವರನ್ನು ವಿಚಾರಣೆ ನಡೆಸಲಾಗಿತ್ತು.
ಈ ಸಂಸ್ಥೆಯು ಐದು ವರ್ಷಗಳಿಂದ ಐಸಿಐಸಿಐ ಬ್ಯಾಂಕ್ನಿಂದ ವಿದೇಶಿ ಕರೆನ್ಸಿ ರೂಪದಲ್ಲಿ ಸಾಲ ಪಡೆದ ಏಳು ಸಂಸ್ಥೆಗಳಿಗೆ ಹಣಕಾಸು ಸಲಹೆ ನೀಡುತ್ತಿತ್ತು.