ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಾಡುಗೋಡಿ ಬಳಿ ಮೆಟ್ರೊ ನಿಲ್ದಾಣಕ್ಕೆ ಹಾಗೂ ಡಿಪೊ ನಿರ್ಮಾಣಕ್ಕೆ ಮೀಸಲು ಅರಣ್ಯದ 44 ಎಕರೆ ಜಾಗವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಬಳಸಿಕೊಳ್ಳಲಿದೆ. ಇದಕ್ಕೆ ಬದಲಿಯಾಗಿ ಕಾಡು ಬೆಳೆಸುವುದಕ್ಕೆ ಜೊಯಿಡಾ ತಾಲ್ಲೂಕಿನಲ್ಲಿ ಕಾಳಿ ಹುಲಿ ಯೋಜನೆ ಪ್ರದೇಶದ ಬಳಿ ಅಷ್ಟೇ ಪ್ರಮಾಣದ ಬದಲಿ ಜಾಗ ನೀಡಲು ನಿಗಮ ಮುಂದಾಗಿದೆ.
ನಗರದಿಂದ ಸುಮಾರು 480 ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ಬದಲಿ ಜಾಗ ನೀಡುವ ಪ್ರಸ್ತಾವಕ್ಕೆ ಅರಣ್ಯ ಇಲಾಖೆಯೂ ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯಲು ಪ್ರಸ್ತಾವ ಸಲ್ಲಿಸಲಾಗಿದೆ.
‘ಮೀಸಲು ಅರಣ್ಯದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಬೇಕಾದರೆ ಅದಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಬೇಕಾಗುತ್ತದೆ. ನಮ್ಮಿಂದ ಜಾಗ ಪಡೆಯುವವವರು ಅದಕ್ಕೆ ಪ್ರತಿಯಾಗಿ ಬೇರೆ ಕಡೆ ಜಾಗ ಬಿಟ್ಟುಕೊಡಬೇಕು. ಬದಲಿ ಜಾಗವು ನಮಗೆ ಸಮ್ಮತವಾದರೆ ಮೀಸಲು ಅರಣ್ಯದ ಜಾಗವನ್ನು ಬಿಟ್ಟುಕೊಡಬಹುದು’ ಎಂದು ನಗರ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಅರಣ್ಯದ ಜಾಗ ಬಿಟ್ಟುಕೊಡಲು ನಮ್ಮ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ದಾಂಡೇಲಿಯಲ್ಲಿ ಬದಲಿ ಜಾಗ ನೀಡಲು ಬಿಎಂಆರ್ಸಿಎಲ್ ಒಪ್ಪಿರುವುದರಿಂದ ಈ ಕುರಿತ ಅಡ್ಡಿ ನಿವಾರಣೆ ಆಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ
ಹಿಡಿಯುತ್ತದೆ ಎಂದು ಅವರು ವಿವರಿಸಿದರು.
‘ಕಾಡುಗೋಡಿಯಲ್ಲಿ ಮೆಟ್ರೊ ಮಾರ್ಗಕ್ಕೆ (ರೀಚ್ 1ಎ) ಹೆಚ್ಚೇನೂ ಜಾಗ ಬೇಕಾಗುವುದಿಲ್ಲ. ಆದರೆ, ಡಿಪೊ ನಿರ್ಮಾಣಕ್ಕೆ ಹೆಚ್ಚಿನ ಜಾಗದ ಅಗತ್ಯವಿದೆ. ಇಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಹೆಚ್ಚು ಮರಗಳೂ ಇಲ್ಲ. ನಾವು ಕಾಳಿ ಹುಲಿ ಯೋಜನೆ ಪ್ರದೇಶದ ಸಮೀಪ ಮೂರು ಗ್ರಾಮಗಳಲ್ಲಿ ಜಾಗ ಗುರುತಿಸಿದ್ದೇವೆ. ಅಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರೂ ಈ ಜಾಗವನ್ನು ಪರಿಶೀಲಿಸಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
‘ಅಲ್ಲಿನ ಕೆಲವು ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕೆಲವು ಗ್ರಾಮಸ್ಥರು ಜಾಗ ನೀಡಲು ಒಪ್ಪಿದ್ದಾರೆ. ಅವರಿಗೆ ಎಕರೆಗೆ ತಲಾ ₹ 3 ಲಕ್ಷದಂತೆ ಪರಿಹಾರ ನೀಡಲಿದ್ದೇವೆ. ಈ ಬಗ್ಗೆ ಮಾತುಕತೆ ನಡೆದಿದೆ. ಇದುವರೆಗೆ 28 ಎಕರೆಯಷ್ಟು ಜಾಗವನ್ನು ಗುರುತಿಸಿದ್ದೇವೆ’ ಎಂದು ಅವರು ವಿವರಿಸಿದರು.
ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗಿನ ಮೆಟ್ರೊ ಮಾರ್ಗದ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. ಈ ಮಾರ್ಗದಲ್ಲಿ ಕಾಡುಗೋಡಿ, ಉಜ್ವಲ ವಿದ್ಯಾಲಯ ಹಾಗೂ ವೈಟ್ಫೀಲ್ಡ್ ನಿಲ್ದಾಣಗಳಿಗೆ ಅರಣ್ಯ ಇಲಾಖೆಗೆ ಸೇರಿದ ಸ್ಥಳ ಬಳಕೆ ಆಗಲಿದೆ. ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹಾಗಾಗಿ ಇಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ.
ಕಾಡುಗೋಡಿ ಹಾಗೂ ಉಜ್ವಲ ವಿದ್ಯಾಲಯ ನಿಲ್ದಾಣಗಳಿಗೆ ಅರಣ್ಯ ಇಲಾಖೆಯ ಸ್ವಲ್ಪ ಜಾಗ ಮಾತ್ರ ಬಳಕೆ ಆಗುತ್ತದೆ. ವೈಟ್ಫೀಲ್ಡ್ ನಿಲ್ದಾಣ ಮೀಸಲು ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಇಲ್ಲಿ ಕೆಲಸ ಆರಂಭಿಸಲು ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
‘ಹಸಿರು ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಿ’
ಕಾಡುಗೋಡಿಯಲ್ಲಿ ಅರಣ್ಯ ಇಲಾಖೆ ಜಾಗಕ್ಕೆ ಬದಲಾಗಿ ಕಾಳಿ ಹುಲಿ ಯೋಜನೆ ಪ್ರದೇಶದ ಬಳಿ ಕಾಡು ಬೆಳೆಸುವುದು ಒಳ್ಳೆಯ ವಿಚಾರವೇ. ಆದರೆ, ಇದರಿಂದ ನಗರಕ್ಕೆ ಯಾವುದೇ ಪ್ರಯೋಜನವಾಗದು ಎಂದು ಬಿಬಿಎಂಪಿ ವೃಕ್ಷಾ ಸಮಿತಿಯ ಸದಸ್ಯ ವಿಜಯ್ ನಿಶಾಂತ್ ಅಭಿಪ್ರಾಯಪಟ್ಟರು.
‘ಇಲ್ಲಿನ ಮೀಸಲು ಅರಣ್ಯದಲ್ಲಿ ಈಗ ಕಾಡು ಉಳಿದಿಲ್ಲ. ಬಿಎಂಆರ್ಸಿಎಲ್ ಅಧಿಕಾರಿಗಳು ಹೇಗೂ ಅರಣ್ಯ ಇಲಾಖೆಗೆ ಸೇರಿದ 44 ಎಕರೆ ಜಾಗವನ್ನು ಪಡೆಯುತ್ತಿದ್ದಾರೆ. ಅದರ ಜೊತೆಗೆ ಇನ್ನೂ 10 ಎಕರೆಯನ್ನು ಹೆಚ್ಚುವರಿಯಾಗಿ ಪಡೆದು ಅಲ್ಲೇ ಕಾಡು ಬೆಳೆಸಲು ಕ್ರಮ ಕೈಗೊಳ್ಳಲಿ. ಆ 10 ಎಕರೆಗೆ ಬದಲಿಯಾಗಿ ಬೇರೆ ಕಡೆ ಜಾಗ ನೀಡಲಿ. ಕಾಡುಗೋಡಿ ಬಳಿಯ ಮೆಟ್ರೊ ನಿಲ್ದಾಣವನ್ನು ಹಸಿರು ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಿ. ಈ ನಿಲ್ದಾಣದ ಸಮೀಪ ಬೃಹತ್ತಾಗಿ ಬೆಳೆಯುವ ಜಾತಿಯ ಮರಗಳನ್ನು ಬೆಳೆಸಲಿ’ ಎಂದರು.
ಮಂಚನಬೆಲೆಯ ಜಾಗ ಬಳಸಲು ಅಡ್ಡಿ
‘ಮೆಟ್ರೊ ಕಾಮಗಾರಿಗೆ ಪರ್ಯಾಯವಾಗಿ ಅರಣ್ಯ ಬೆಳೆಸಲು ಮಂಚನಬೆಲೆ ಬಳಿ 16 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಅಲ್ಲಿ ಎರಡು ಕಡೆ ಕಲ್ಲಿನ ಗಣಿಗಾರಿಕೆ ನಡೆಸಲು ಖಾಸಗಿಯವರಿಗೆ ಅನುಮತಿ ನೀಡಲಾಗಿದೆ. ಅವರು ಅಲ್ಲಿ ಇನ್ನೂ ಗಣಿಗಾರಿಕೆ ಆರಂಭಿಸಿಲ್ಲ. ಈ ಅನುಮತಿಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಮನವಿ ಮಾಡಿದ್ದೇವೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.