ಮಂಗಳೂರು: ಮಂಗಳೂರು ನಗರ, ಉಳ್ಳಾಲ, ವಿಟ್ಲ ಸಹಿತ ಹಲವೆಡೆ ಭಾನುವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಿತು. ಇದರಿಂದ ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಇಳೆ ಸ್ವಲ್ಪ ತಂಪಾಯಿತು.
ಉಳ್ಳಾಲ ಭಾಗದ ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆ, ಕೋಟೆಕಾರು, ತಲಪಾಡಿ ಭಾಗದಲ್ಲಿ ಭಾರಿ ಗಾಳಿ ಸಹಿತ ಒಂದು ಗಂಟೆ ಮಳೆಯಾಯಿತು. ಗುಡುಗು, ಸಿಡಿಲಿನಿಂದ ಕೂಡಿದ್ದ ವರ್ಷಧಾರೆಯಿಂದಾಗಿ ಮಳೆಗಾಲದ ವಾತಾವರಣವನ್ನು ನಿರ್ಮಿಸಿತು.
ವಿಟ್ಲ ಪ್ರದೇಶದಲ್ಲಿ ಸುಮಾರು 10 ನಿಮಿಷ ಗಾಳಿ, ಗುಡುಗು ಸಹಿತ ಮಳೆ ಸುರಿಯಿತು.
ಹಲವೆಡೆ ಮಳೆಯಾಗುವ ಸಾಧ್ಯತೆ
ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿಯ ಕೆಲವೆಡೆ ಮಳೆಯಾಗಿದೆ.
ಸಂಕೇಶ್ವರ, ಚಿಂಚೋಳಿ, ಸೈದಾಪುರದಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ. ಬಳ್ಳಾರಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಹವಾಮಾನ ಮುನ್ಸೂಚನೆ: ರಾಜ್ಯದ ಹಲವೆಡೆ ಗುಡುಗುಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.