ಬೈರುತ್/ಅಂಕಾರ: ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಪೂರ್ವ ಭಾಗದಲ್ಲಿರುವ ಘೌಟಾ ನಗರದ ಮೇಲೆ ಮತ್ತೆ ವೈಮಾನಿಕದಾಳಿ ನಡೆಸಲಾಗಿದೆ.
ಶುಕ್ರವಾರ ನಡೆದಿದೆ ಎನ್ನಲಾದ ರಾಸಾಯನಿಕ ವಿಷ ದಾಳಿಯಲ್ಲಿ 80ಕ್ಕೂ ಅಧಿಕ ನಾಗರಿಕರು ಮೃತಪಟ್ಟ ಪ್ರಕರಣದ ನಂತರ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ಕನಿಷ್ಠ 49 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಪರಿಹಾರ ಸಂಸ್ಥೆ ಹೇಳಿದೆ.
‘ಭಾನುವಾರವೂ ರಾಸಾಯನಿಕ ದಾಳಿ ನಡೆದಿದೆ’ ಎಂದು ಬಂಡುಕೋರರ ಗುಂಪು ಜೈಶ್ ಅಲ್–ಇಸ್ಲಾಂ ಆರೋಪಿಸಿದೆ.
ಕದನವಿರಾಮ ಜಾರಿಯಲ್ಲಿ ಇದ್ದಾಗ ಹಾಗೂ ಸಿರಿಯಾ ಸೇನೆ ಮತ್ತು ಜೈಶ್ ಅಲ್–ಇಸ್ಲಾಮ್ ನಡುವೆ ಮಾತುಕತೆ ಪುನರಾರಂಭದ ಸಾಧ್ಯತೆ ಇದ್ದರೂ ಈ ದಾಳಿ ನಡೆದಿದೆ.
ರಾಸಾಯನಿಕ ದಾಳಿ ಕಟ್ಟುಕಥೆ: ‘ರಾಸಾಯನಿಕ ವಿಷ ದಾಳಿ ಎಂಬುದು ಕಟ್ಟುಕಥೆ’ ಎಂದು ಸಿರಿಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಹಾಗೂ ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿವೆ.
ಖಂಡನೆ: ಸಿರಿಯಾದಲ್ಲಿ ನಡೆದಿದೆ ಎನ್ನಲಾದ ರಾಸಾಯನಿಕ ದಾಳಿಯನ್ನು ವಿಶ್ವಸಂಸ್ಥೆ ಹಾಗೂ ಟರ್ಕಿ ತೀವ್ರವಾಗಿ ಖಂಡಿಸಿವೆ.