ಔರಾದ್: ತಾಲ್ಲೂಕಿನ ಯನಗುಂದಾ ಗ್ರಾಮದಲ್ಲಿ ಶನಿವಾರ ನಡೆದ ಬೇಸಿಗೆ ಸಿಬಿರದಲ್ಲಿ ವಿದ್ಯಾರ್ಥಿಗಳು ಕೆಸರು ಸ್ನಾನ (ಮಡ್ಬಾತ್) ಮಾಡಿ ಸಂಭ್ರಮಿಸಿದರು.ಯನಗುಂದಾ ಸರ್ಕಾರಿ ಶಾಲೆ ಸ್ಕೌಟ್ಸ್ ವಿದ್ಯಾರ್ಥಿಗಳಿಗಾಗಿ ಪ್ರಗತಿಪರ ರೈತ ಚಂದ್ರಶೇಖರ ಪಾಟೀಲರ ಹೊಲದಲ್ಲಿ ಆಯೋಜಿಸಲಾದ ಶಿಬಿರದಲ್ಲಿ ವಿದ್ಯಾರ್ಥಿ ಗಳು ಆಡಿ-ಕುಣಿದು ಸಂಭ್ರಮಿಸಿದರು.
ನೀರಿನಲ್ಲಿ ನೆನೆಸಿಡಲಾದ ಹುತ್ತಿನ ಮಣ್ಣು ಇಡೀ ಮೈಗೆ ಬಳಿದುಕೊಂಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೆಲ ಹೊತ್ತಿನ ನಂತರ ಬಾವಿಯಲ್ಲಿ ಈಜಾಡಿ ಸಂಭ್ರಮಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ, ಬಾಲಾಜಿ ಅಮರವಾಡಿ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಹೂಗಾರ, ಗುರುರಾಜ ಕ್ಕಳ ಜತೆ ಕೆಸರಿನ ಸ್ನಾನ ಮಾಡಿದರು.
ಶಿಬಿರದಲ್ಲಿ ಪಾಲ್ಗೊಂಡ ಡಾ. ನಾಗೇಶ ಕೌಟಗೆ, ‘ಪ್ರಕೃತಿ ಚಿಕಿತ್ಸೆ ಭಾಗವಾದ ಕೆಸರು ಸ್ನಾನದಿಂದ ಚರ್ಮ ರೋಗ ನಿವಾರಣೆ ಮತ್ತು ಚರ್ಮದ ಕಾಂತಿ ಹೆಚ್ಚಿಸುತ್ತದೆ’ ಎಂದು ಹೇಳಿದರು.
ಉಪನ್ಯಾಸಕ ಶರಣಪ್ಪ ಬಿರಾದಾರ ಮಾತನಾಡಿ ‘ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಧೈರ್ಯ, ಸಾಹಸ, ಛಲ, ಆತ್ಮ ವಿಶ್ವಾಸ ಬೆಳೆಯುತ್ತದೆ’ ಎಂದರು.
ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಮಹಾಂತೇಶ, ಡಾ. ಲಕ್ಷ್ಮಿಕಾಂತ ವಲ್ಲೆಪೂರೆ, ಡಾ. ಗಂಗಾರಡ್ಡಿ, ಪಿಡಿಒ ಶಿವಕುಮಾರ ಘಾಟೆ, ಶಿವಾನಂದ ಔರಾದೆ, ಅಮೃತರಾವ ಬಿರಾದಾರ, ಸಾಯಿನಾಥ, ಹಣಮಂತರಾವ ಪಾಟೀಲ, ಬಸವರಾಜ ಘುಳೆ, ಅಮರ ಪಾಟೀಲ ಉಪಸ್ಥಿತರಿದ್ದರು.