ಚಾಮರಾಜನಗರ: ಬಂಡೀಪುರಹುಲಿ ರಕ್ಷಿತಾರಣ್ಯದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ 3 ತಿಂಗಳ ಹಿಂದೆ ಮೃತಪಟ್ಟ 2 ಹುಲಿಗಳ ಸಾವಿನ ತನಿಖೆಯನ್ನು ಅರಣ್ಯ ಇಲಾಖೆ ಚುರುಕುಗೊಳಿಸಿದೆ.
ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿ ವಿಷ ಪ್ರಾಶನದ ಶಂಕೆ ವ್ಯಕ್ತಪಡಿಸಿದೆ. ಆದರೆ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಜಿಕೆವಿಕೆ ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ ನೀಡಿರುವ ವರದಿಯಲ್ಲಿ ಹುಲಿಗಳ ದೇಹದ ಅಂಗಾಂಗಗಳಲ್ಲಿ ವಿಷದ ಅಂಶ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
‘ಕೊಯಮತ್ತೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಬಂದಿರುವುದು ಪ್ರಾಥಮಿಕ ವರದಿಯಷ್ಟೇ. ಇದರಲ್ಲಿ ಹುಲಿಗಳ ದೇಹದಲ್ಲಿ ರಾಸಾಯನಿಕಗಳು ಪತ್ತೆಯಾಗಿವೆ ಎಂದಿದೆ. ಅಂತಿಮ ವರದಿ ಬಂದ ಬಳಿಕ ಗೊತ್ತಾಗಲಿದೆ’ ಎಂದು ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದರು.