ಅಳ್ನಾವರ/ ಅಥಣಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹2.55 ಕೋಟಿ ಮೌಲ್ಯದ 7 ಕೆ.ಜಿ. 722 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ 22 ಕೆ.ಜಿ. 400 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋವಾದಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ಚಿನ್ನಾಭರಣಗಳನ್ನು, ಧಾರವಾಡ ಜಿಲ್ಲೆ ಕಡಬಗಟ್ಟಿ ಕ್ರಾಸ್ ಬಳಿ ಇರುವ ಚೆಕ್ಪೋಸ್ಟ್ನಲ್ಲಿ ಭಾನುವಾರ ತಡರಾತ್ರಿ ವಶಪಡಿಸಿಕೊಳ್ಳಲಾಗಿದೆ.
ನಾಲ್ಕು ಪೆಟ್ಟಿಗೆಗಳಲ್ಲಿ 44 ಚಿನ್ನದ ಬಳೆಗಳು ಮತ್ತು ಮೂರು ಪೆಟ್ಟಿಗೆಗಳಲ್ಲಿ 30 ಮಂಗಳಸೂತ್ರ ಸರಗಳು ಪತ್ತೆಯಾಗಿವೆ. ಗೋವಾದ ಪಿ.ಕೆ.ಜುವೆಲರಿ ಮಾಲೀಕ ಪ್ರತೀಕ್ ನಾರ್ವೇಕರ (27) ಹಾಗೂ ಇದೇ ಮಳಿಗೆಯ ಮಾರಾಟ ಪ್ರತಿನಿಧಿ, ರಾಜಸ್ಥಾನದ ವಿಕ್ರಮ್ಸಿಂಗ್ ರಾಥೋಡ (32) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಮದಬಾವಿ ಚೆಕ್ಪೋಸ್ಟ್ ಬಳಿ, ಕಾರಿನಲ್ಲಿ ಸಾಗಿಸುತ್ತಿದ್ದ ಬೆಳ್ಳಿ ಆಭರಣಗಳನ್ನು ಚುನಾವಣಾ ಸಿಬ್ಬಂದಿ ಸೋಮವಾರ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅರಗದವರಾದ ಸರಜಿರಾವ ಬಾಳಾಸಾಹ ಪಾಟೀಲ ಎನ್ನುವವರು ಮದಬಾವಿ ಕಡೆಗೆ ಕಾರಿನಲ್ಲಿ ಆಭರಣ ಗಳನ್ನು ಕೊಂಡೊಯ್ಯುತ್ತಿದ್ದರು. ಅವರು ಕೊಟ್ಟ ದಾಖಲೆಗಳು ಸಮಂಜಸ ಎನಿಸಲಿಲ್ಲವಾದ್ದರಿಂದ ವಾಹನ ಸಮೇತ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.