ಗೋರಖ್ಪುರ(ಉತ್ತರ ಪ್ರದೇಶ): ಬುರುಡೆಗಂಟಿದ ಟೋಪಿ ತೊಟ್ಟ ಮುಸ್ಲಿಂ ಶಿಕ್ಷಕರು ಈ ಮದರಸಾದಲ್ಲಿ ಸಂಸ್ಕೃತದ ಪಾಠ ಮಾಡುತ್ತಾರೆ. ಹಿಜಾಬ್ಗಳನ್ನು ಧರಿಸಿದ ವಿದ್ಯಾರ್ಥಿನಿಯರು ಶ್ರದ್ಧೆಯಿಂದ ‘ಭವಿಷ್ಯಾಮಿ ಧೀರೊ, ಭವಿಷ್ಯಾಮಿ ವಿರಃ, ಭವಿಷ್ಯಾಮಿ ದಾನಿ, ಸ್ವದೇಶಾಭಿಮಾನಿ’ ಎಂದು ಸಂಸ್ಕೃತ ಪದ್ಯದ ಸಾಲುಗಳನ್ನು ಕಲಿಯುತ್ತಾರೆ.
ಅಂದಹಾಗೆ ಸಂಸ್ಕೃತ ಕಲಿಸುವ ಈ ದಾರುಲ್ ಉಲೂಮ್ ಹುಸೈನಿಯಾ ಮದರಸಾ ಇರುವುದು ಉತ್ತರ ಪ್ರದೇಶದ ಗೊರಖ್ಪುರದಲ್ಲಿ. ಈ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಹಿಂದೆ ಇದೇ ಕ್ಷೇತ್ರದಿಂದ ಸಂಸದರಾಗಿ ಪ್ರತಿನಿಧಿಸುತ್ತಿದ್ದರು.
‘ನಮ್ಮದು ಮಾಡ್ರನ್ ಮದರಸಾ. ಇದು ಉತ್ತರ ಪ್ರದೇಶದ ಶಿಕ್ಷಣ ಮಂಡಳಿಗೆ ಸೇರಿದೆ. ಇಲ್ಲಿ ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತದೊಂದಿಗೆ ಸಂಸ್ಕೃತವನ್ನು ಕಲಿಸುತ್ತೇವೆ. ಅಲ್ಲದೇ, ಅರಬಿಕ್ ಸಹ ಇಲ್ಲಿ ಹೇಳಿಕೊಡುತ್ತೇವೆ’ ಎನ್ನುತ್ತಾರೆ ಈ ಮದರಸಾದ ಪ್ರಿನ್ಸಿಪಾಲರು.
‘ಸಂಸ್ಕೃತ ಕಲಿಯುತ್ತಿರುವುದರಿಂದ ನಮಗೆ ಬಹಳ ಖುಷಿಯಾಗುತ್ತಿದೆ. ನಮ್ಮ ಶಿಕ್ಷಕರೂ ಚನ್ನಾಗಿ ಪಾಠ ಮಾಡುತ್ತಾರೆ. ಈ ಭಾಷೆ ಕಲಿಯಲು ನಮ್ಮ ಪೋಷಕರು ಸಹ ಸಹಕಾರ ನೀಡುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ಸಂತಹ ಹಂಚಿಕೊಳ್ಳುತ್ತಿದ್ದಾರೆ.