ನವದೆಹಲಿ: ಸಂಸತ್ತ್ತಿನ ಬಜೆಟ್ ಅಧಿವೇಶನ ಕಲಾಪ ಸುಸೂತ್ರವಾಗಿ ನಡೆಯಲು ಅವಕಾಶ ನೀಡದ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಏ.12ರಂದು) ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಸದ್ಭಾವನಾ ಸತ್ಯಾಗ್ರಹ ನಡೆಸಿದ ಬೆನ್ನಲ್ಲೇ ಮೋದಿ ಅವರೂ ಉಪವಾಸ ಮಾಡಲಿದ್ದಾರೆ.
ಸತ್ಯಾಗ್ರಹ ದಿನವೂ ಪ್ರಧಾನಿಯ ದೈನಂದಿನ ಕಾರ್ಯಕ್ರಮಗಳಿಗೆ ಯಾವುದೇ ಅಡೆತಡೆಯಾಗುವುದಿಲ್ಲ. ಕಡತ ವಿಲೇವಾರಿ, ಜನರು ಮತ್ತು ಅಧಿಕಾರಿಗಳ ಭೇಟಿ ಎಂದಿನಂತೆ ನಡೆಯಲಿದೆ. ಬಿಜೆಪಿ ಸಂಸದರು ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದೇ ದಿನ ಹುಬ್ಬಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಬಿಜೆಪಿ ಸಂಸದರು ಮತ್ತು ನಾಯಕರು ಏಪ್ರಿಲ್ 14ರಿಂದ ಮೇ 15ರವರೆಗೆ 20,844 ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.