ಧಾರವಾಡ: ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ( SVEEP) ಚಟುವಟಿಕೆಯಡಿಯಲ್ಲಿ ಇಂದು ಬೆಳಿಗ್ಗೆ ಧಾರವಾಡದ ವಿವಿಧ ಪ್ರದೇಶಗಳಲ್ಲಿ ಆಗಸದಿಂದ ಮತದಾರರ ಜಾಗೃತಿ ಸಂದೇಶ ಸಾರುವ ಕಾರ್ಯಕ್ರಮ ಜರುಗಿತು.
ಮಹಾರಾಷ್ಟ್ರ ಮೂಲದ ಅಲ್ಫಾಲೈಟ್ ಏವಿಯೇಷನ್ ಸಂಸ್ಥೆಯ ಕ್ಯಾಪ್ಟನ್ ನಿತ್ಯಾನಂದ ನಾಯಕವಾಡಿ ಅವರು ಬೆಳಿಗ್ಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಿಂದ ತಮ್ಮ ಪ್ಯಾರಾಮೋಟರ್ ಗ್ಲೈಡಿಂಗ್ ಅನ್ನು ಯಶಸ್ವಿಯಾಗಿ ಆಕಾಶಕ್ಕೆ ಹಾರಿಸಿದರು.
ಅಲ್ಲಿಂದ ಹಾರಿ ಬಿಟ್ಟ ಮತದಾರರ ಜಾಗೃತಿ ಸಂದೇಶದ ಕರಪತ್ರಗಳನ್ನು ಬೆಳಗಿನ ವಾಯುವಿಹಾರಕ್ಕೆ ಆಗಮಿಸಿದ್ದ ಜನತೆ, ಕ್ರೀಡಾಪಟುಗಳು ಕುತೂಹಲದಿಂದ ಪಡೆದು , ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಜನ್ನತ್ ನಗರ,ರಾಜೀವಗಾಂಧಿ ನಗರ ,ಹೊಸಯಲ್ಲಾಪುರ ಮೊದಲಾದ ಪ್ರದೇಶಗಳಲ್ಲಿ ಮತದಾರರ ಸಂದೇಶದ ಕರಪತ್ರಗಳನ್ನು ಹಾರಿಬಿಡಲಾಯಿತು. ಚರಂತಿಮಠ ಗಾರ್ಡನ್ ಬಳಿ ಪ್ಯಾರಾಗ್ಲೈಡಿಂಗ್ ವಾಹನವು ಮರಳಿ ಭೂಸ್ಪರ್ಶ ಮಾಡಿದಾಗ ನೆರೆದಿದ್ದ ಜನತೆ ಸಂತಸದಿಂದ ಸ್ವಾಗತಿಸಿದರು.
ಕೆಸಿಡಿ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ,ಜಿ.ಪಂ.ಸಿಇಓ ಸ್ನೇಹಲ್ ಆರ್ ಅವರು ಶುಭ ಹಾರೈಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೇ.12 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಅವರು ಮನವಿ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಮಹಾನಗರಪಾಲಿಕೆ ವಲಯ 2 ರ ಸಹಾಯಕ ಆಯುಕ್ತ ಜಿ.ಜಿ.ಹಿರೇಮಠ, ಪರಿಸರ ಇಂಜಿನಿಯರ್ ಸರೋಜ ಪೂಜಾರ,ಜಿ.ಎನ್.ಗುತ್ತಿ ಸೇರಿದಂತೆ ಆರೋಗ್ಯ ನಿರೀಕ್ಷಕರು,ಪಾಲಿಕೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು