ಹುಬ್ಬಳ್ಳಿ: 'ಕುರುಡು ಕಾಂಚಾಣ ಕುಣಿಯುತಲಿತ್ತು' ಎಂಬ ಕವನ ಬರೆದ ವರಕವಿ ದ.ರಾ. ಬೇಂದ್ರೆಯವರ ಮನೆಗೆ ಬೇಕಾಬಿಟ್ಟಿಯಾಗಿ ಹಣ ಚೆಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿರುವುದು ದೊಡ್ಡ ದುರಂತ ಎಂದು ಜನಾಂದೋಲನ ಮಹಾಮೈತ್ರಿಯ ಸಂಸ್ಥಾಪಕರಲ್ಲೊಬ್ಬರಾದ ರಾಘವೇಂದ್ರ ಕುಷ್ಟಗಿ ಅಭಿಪ್ರಾಯಪಟ್ಟರು.
ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಅವರು ಸೌಹಾರ್ದದ ಸಂಕೇತವಾದ ಸಿದ್ಧಾರೂಢ ಮಠಕ್ಕೆ ಭೇಟಿ ನೀಡುತ್ತಿರುವುದು ವಿಪರ್ಯಾಸ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
'ನಮ್ಮ ಸಂಸ್ಕೃತಿಯ, ಗೌರವದ ಕೇಂದ್ರಗಳಿಗೆ ಅಮಿತ್ ಶಾ ಭೇಟಿ ನೀಡಬೇಡಪ್ಪ' ಎಂದು ರಾಘವೇಂದ್ರ ಕುಷ್ಟಗಿ ಮನವಿ ಮಾಡಿದರು.
'ಜಾತ್ಯತೀತ ಜನತಾದಳ, ಕಾಂಗ್ರೆಸ್, ಬಿಜೆಪಿ (ಜೆಸಿಬಿ)ಯಂತಹ ಪಕ್ಷಗಳು ಮನೆಯೊಂದು ಮೂರು ಬಾಗಿಲು ಇದ್ದಂತೆ. ಈ ಮೂರೂ ಪಕ್ಷಗಳು ಕಾರ್ಪೋರೆಟ್ ಕಂಪನಿಗಳ ಪಾದಸೇವೆ ಮಾಡುತ್ತವೆ’ ಎಂದು ಅವರು ಟೀಕಿಸಿದರು.
'ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ ನರಗುಂದ ಅವರಿಗೆ ಮಹಾಮೈತ್ರಿಯಿಂದ ಬೆಂಬಲ ನೀಡಿದ್ದೇವೆ. ಸಂತೋಷ ಅವರನ್ನು ಗೆಲ್ಲಿಸುವ ಮೂಲಕ ಭ್ರಷ್ಟರಿಗೆ ಪಾಠ ಕಲಿಸಬೇಕು ' ಎಂದು ಮಹಾಮೈತ್ರಿಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.