ಧಾರವಾಡ : ರಂಗಭೂಮಿ ಕಲಾವಿದ ಜಗುಚಂದ್ರ ಕುಡ್ಲ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಬೆಳಗ್ಗೆ ಹೃದಯ ನೋವಿನಿಂದ ಬಳಲುತ್ತಿದ್ದ ಅವರು ನಗರದ ಡಾ. ಎಸ್.ಆರ್. ರಾಮನಗೌಡರ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಗರದ ಶಿವಾಜಿ ವೃತ್ತದ ಬಳಿಯಿರುವ ಸರಕಾರಿ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ‘ಕೊನೆ ನಮಸ್ಕಾರ’ ನಾಟಕದ ಮೂಲಕ ದೇಶ-ವಿದೇಶದಲ್ಲಿ ಹಾಸ್ಯದ ಹೊನಲು ಹರಿಸಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಜಗುಚಂದ್ರ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಹತ್ತು ಹಲವು ನಾಟಕಗಳನ್ನು ರಚಿಸಿ, ನಿರ್ದೇಶನ ಮಾಡಿದ್ದ ಅವರು ನೂರಾರು ಮಕ್ಕಳನ್ನು ರಂಗಭೂಮಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.
ಸದ್ಯ ಜಗುಚಂದ್ರ ಅವರ ಪಾರ್ಥಿವ ಶರೀರ ಧಾರವಾಡದ ಹಳಿಯಾಳ ರಸ್ತೆಯಲ್ಲಿರುವ ಗಣೇಶನಗರದ ಅವರ ನಿವಾಸದಲ್ಲಿದ್ದು, ಮಧ್ಯಾಹ್ನ 1 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ಮಧ್ಯಾಹ್ನ 3ಗಂಟೆಗೆ ಹೊಸಯಲ್ಲಾಪೂರದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.