ಚಿಂತಾಮಣಿ: ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ಚಾಲಕರು ತಾವು ಸುರಕ್ಷವಾಗಿದ್ದು ಇತರರ ಸುರಕ್ಷತೆಯನ್ನು ಕಾಪಾಡಬೇಕು ಎಂದು ನಗರದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜೇಂದ್ರಕುಮಾರ್ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಪೊಲೀಸ್ ಇಲಾಖೆ ಸಂಯುಕ್ತವಾಗಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ರಸ್ತೆ ಸುರಕ್ಷತಾ ಸಪ್ತಾಹ–2018’ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕ ಜೀವನಶೈಲಿಯಿಂದ ವಾಹನಗಳ ಸಂಖ್ಯೆ ದಿನ ದಿನಕ್ಕೂ ಅಧಿಕವಾಗುತ್ತಿವೆ. ರಸ್ತೆಗಳು ಮಾತ್ರ ಇದ್ದಷ್ಟೇ ಇವೆ. ಮನೆಯಿಂದ ಹೊರಗೆ ಬಂದವರು ಮತ್ತೆ ಸುರಕ್ಷಿತವಾಗಿ ಮನೆಗೆ ಸೇರಬೇಕು ಎಂದು ಅವರು ಸಲಹೆ ನೀಡಿದರು.
ಮನೆಯಲ್ಲಿ ತಮ್ಮ ಕುಟುಂಬದವರು ತಮಗಾಗಿ ಕಾಯುತ್ತಿರುತ್ತಾರೆ ಎಂಬುದು ಸದಾ ಚಾಲಕರ ಮನಸ್ಸಿನಲ್ಲಿ ಇರಬೇಕು ಎಂದರು.
ಚಾಲಕರು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದರ ಜತೆಗೆ ಇತರರನ್ನು ಸಂಚಾರ ನಿಯಮ ಪಾಲನೆಗೆ ಪ್ರೋತ್ಸಾಹಿಸಬೇಕು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತಗಳು ಕಡಿಮೆಯಾಗುತ್ತವೆ. ಸಾರ್ವಜನಿಕರು ಸುರಕ್ಷತೆಯಿಂದ ಚಾಲನೆ ಮಾಡುವುದರ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಹಕಾರ ನೀಡಬೇಕು ಎಂದು ನುಡಿದರು.
ಕುಡಿದು ವಾಹನ ಚಾಲನೆ ಮಾಡುವುದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಚಾಲನೆ ಮಾಡುವುದು, ಸಾಹಸದ ಚಾಲನೆ, ಅತಿವೇಗದ ಚಾಲನೆ ಮಾಡುವ ಪ್ರವೃತ್ತಿಯನ್ನು ಕೈಬಿಡಬೇಕು ಎಂದು ಕಿವಿಮಾತು ಹೇಳಿದರು.
ಡಿವೈಎಸ್ಪಿ ನಾಗೇಶ್, ವಕೀಲರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಸಿಪಿಐ ರಮೇಶ್ ಭಾಗವಹಿಸಿದ್ದರು.