ಹುಮನಾಬಾದ್: ನಗರದಲ್ಲಿ ಕಳೆದ ಎರಡು ದಶಕ ಹಿಂದೆ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಹೊಸ ಕಟ್ಟಡ ಉದ್ಘಾಟನೆಗೊಂಡು 6 ತಿಂಗಳು ಕಳೆದರು ಸ್ಥಳಾಂತರವಾಗಿಲ್ಲ.
1998ರಲ್ಲಿ ತಾಲ್ಲೂಕಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರತಿ ತಿಂಗಳಿಗೆ ₹ 9,600ರಂತೆ ಬಾಡಿಗೆ ನಿಗದಿಪಡಿಸಿ, ಆರಂಭಿಸಲಾದ ಕಾಲೇಜಿನಲ್ಲಿ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆದು, ಉತ್ತಮ ರೀತಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಿವೇಶನ ಕೊರತೆ ಕಾರಣ ಸ್ವಂತ ಕಟ್ಟಡವಿಲ್ಲದೇ ಮೂಲಸೌಲಭ್ಯ ಕೊರತೆ ಮಧ್ಯೆ ಬಾಡಿಗೆ ಕಟ್ಟಡದಲ್ಲೇ ಕಾಲೇಜು ನಡೆಯುತ್ತಿತ್ತು.
ಕಳೆದ ನಾಲ್ಕೈದು ವರ್ಷಗಳಿಂದ ಪಾಲಕರ ಒತ್ತಡ, ಕಾಲೇಜು ಸಿಬ್ಬಂದಿ ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಮನವಿಯಿಂದ ಅಗತ್ಯ ನಿವೇಶನ ಜತೆಗೆ ಕಟ್ಟಡ ನಿರ್ಮಾಣಕ್ಕೂ ಅನುದಾನ ಬಂದು 2017ರ ಸೆಪ್ಟೆಂಬರ್ 16ಕ್ಕೆ ನೂತನ ಕಟ್ಟಡ ಉದ್ಘಾಟನೆಗೊಂಡಿದೆ. ಆದರೆ, ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳದ್ದರಿಂದ ವಿದ್ಯಾರ್ಥಿ ಗಳಿಗೆ ಇನ್ನೂ ನೂತನ ಕಟ್ಟಡದಲ್ಲಿ ಅಧ್ಯಯನ ಮಾಡುವ ಭಾಗ್ಯ ಸಿಕ್ಕಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಬಾಡಿಗೆ ಸಮಸ್ಯೆ: ಈ ಮಧ್ಯ ಹಳೆ ಕಟ್ಟಡದ ಮಾಲೀಕರು ಕಟ್ಟಡ ಬಾಡಿಗೆ ನೀಡುವಾಗ ಪ್ರತಿ 5ವರ್ಷಕ್ಕೊಮ್ಮೆ ಬಾಡಿಗೆ ಹೆಚ್ಚಿಸಬೇಕೆಂದು ಕರಾರು ಮಾಡಿಕೊಂಡಿದ್ದರು. ಈ ಹಿಂದಿನ ಪ್ರಾಚಾರ್ಯರು ಆರಂಭದಲ್ಲಿ ನೀಡುತ್ತಿದ್ದ ಬಾಡಿಗೆ ನೀಡಿದ್ದಾರೆ. ಕಳೆದ ವರ್ಷ ಕಟ್ಟಡ ಮಾಲೀಕರು ಪ್ರತಿ ತಿಂಗಳಿಗೆ ₹ 23,600
ರಂತೆ ಪಾವತಿಸಲು ಒತ್ತಾಯಿಸುತ್ತಿದ್ದಾರೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ತಂದರೆ ಅಷ್ಟೊಂದು ಹಣ ಏಕ ಕಾಲಕ್ಕೆ ಪಾವತಿಸುವುದು ಕಷ್ಟ. ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿ, ಹಂತಹಂತವಾಗಿ ಪಾವತಿಸೋಣ ಎಂಬ ಭರವಸೆ ನೀಡಿದ್ದಾರೆ. ಜೊತೆ ಯಲ್ಲಿ ಬಾಕಿ ಪಾವತಿಸುವವರೆಗೆ ಉಪಕರಣ ತೆಗೆದುಕೊಂಡು ಹೋಗು ವುದಕ್ಕೆ ಬಿಡುವುದಿಲ್ಲ ಎಂದು ಕಟ್ಟಡದ ಮಾಲೀಕರು ಎಚ್ಚರಿಸಿದ್ದಾರೆ ಎನ್ನುತ್ತಾರೆ ಪ್ರಾಚಾರ್ಯ ಸತ್ಯವಾನ ಗಾಯಕವಾಡ್.
ಕುಡುಕರ ತಾಣ: ಕಟ್ಟಡದಲ್ಲಿ ಎಲ್ಲ ಸೌಲಭ್ಯವೂ ಇದೆ. ಆದರೆ, ಕಟ್ಟಡ ಕಾಯುವುದಕ್ಕೆ ಯಾರೊಬ್ಬರು ಇಲ್ಲದ ಕಾರಣ ದುಷ್ಕರ್ಮಿಗಳು ಕೋಣೆಗಳ ಬೀಗ ಮುರಿದಿದ್ದಾರೆ. ಆ ಕಟ್ಟಡದ ಪ್ರವೇಶ ದ್ವಾರ ಹಾಗೂ ವರ್ಗ ಕೋಣೆಯಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ. ಬಹುತೇಕ ಕೋಣೆಗಳ
ಕಿಟಕಿ ಗಾಜುಗಳು ಸಹ ಒಡೆದು ಹಾಳಾಗಿವೆ.
ಬಾಡಿಗೆ ಸಮಸ್ಯೆ ಶೀಘ್ರ ಬಗೆಹರಿಸಿಕೊಂಡು ಕಾಲೇಜ ಅನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸದಿದ್ದರೇ ಸಂಪೂರ್ಣ ಮದ್ಯವ್ಯಸನಿಗಳ ತಾಣವಾಗಿ ಪರಿವರ್ತನೆಗೊಳ್ಳುತ್ತದೆ. ಪೂರ್ಣವಾಗಿ ಕಟ್ಟಡ ಹಾಳಾಗುವುದು. ಸಂಬಂಧಪಟ್ಟ ಮೇಲಧಿಕಾರಿಗಳು ಸಮಸ್ಯೆ ಗಂಭೀರ ಪರಿಗಣಿಸಿ, ಪರಿಹಾರ ಕಂಡುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
**
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದ್ದು, ಉತ್ತಮ ಬೋಧಕರು ಇದ್ದಾರೆ. ಮಾಲೀಕ ಬಾಕಿ ಪಾವತಿಸಿ ಸ್ಥಳಾಂತರಿ ಸಲು ಸೂಚಿಸಿದ್ದರಿಂದ ಹೋಗಿಲ್ಲ – ಸತ್ಯವಾನ ಗಾಯಕವಾಡ್, ಪ್ರಾಚಾರ್ಯ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ.
**
ಶಶಿಕಾಂತ ಭಗೋಜಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.