ಬಾಗಲಕೋಟೆ: ‘ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 29 ದಿನಗಳು ಬಾಕಿ ಉಳಿದಿವೆ. ಶಕ್ತಿ ಕೇಂದ್ರದ ಪ್ರಮುಖರು ಒಂದು ಕ್ಷಣ ವ್ಯರ್ಥಮಾಡದೇ, ಬಿಜೆಪಿ ಅಭರ್ಥಿಯನ್ನು ಗೆಲ್ಲಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
ಮುಧೋಳ ನಗರದಲ್ಲಿ ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉತ್ತರ ಪ್ರದೇಶದಲ್ಲಿನ ಗೆಲುವಿನಂತೆ ಕರ್ನಾಟಕ ರಾಜ್ಯದಲ್ಲೂ ಆದೇ ರೀತಿಯ ಫಲಿತಾಂಶ ಬರಲಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕ ಕನಸು ನನಸಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
‘ಸೋಲಿನ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮನಬಂದತೆ ಮಾತನಾಡುತ್ತಿದ್ದಾರೆ. ಎರಡೂ ಕಡೆ ಸ್ಪರ್ಧೆ ಮಾಡಲು ಹೊರಟ ಅವರಿಗೆ ಸೋಲು ನಿಶ್ಚಿತ’ ಎಂದರು.
‘ಹಣ, ಹೆಂಡ, ತೋಳ್ಬಲ, ಜಾತಿಯ ವಿಷ ಬೀಜ ಬಿತ್ತಿ ಅಧಿಕಾರ ನಡೆಸಿದ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಕೊನೆಯಾಗಲಿದೆ’ ಎಂದು ಕಿಡಿಕಾರಿದರು.
‘ಅಭ್ಯರ್ಥಿ ಯಾರು ಎಂದು ಈಗಾಗಲೇ ಘೋಷಣೆಯಾಗಿದ್ದು, ಆಕಾಂಕ್ಷಿಗಳು ಬೇಸರಪಡುವ ಅವಶ್ಯಕತೆ ಇಲ್ಲ. ಸಮೀಕ್ಷೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ’ ಎಂದರು.