ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Last Updated 13 ಏಪ್ರಿಲ್ 2018, 13:31 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸೇವಾ ನಿಯಮಗಳ ಪಾಲನೆ ಮಾಡದೆ 7 ಸಾವಿರಕ್ಕೂ ಹೆಚ್ಚು ನೌಕರರನ್ನು ನೇಮಕ ಮಾಡಿಕೊಂಡು ನಂತರ ಅವರನ್ನೇ ಕೆಲಸದಿಂದ ತೆಗೆದು ಪರಿಹಾರ ನೀಡಿದ ಪ್ರಕರಣದಲ್ಲಿ ಬೆಸ್ಕಾಂ ಅನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ನಿಮ್ಮ ಈ ನಡವಳಿಕೆ ಮತ್ತು ಕಾನೂನು ಬಾಹಿರ ಚಟುವಟಿಕೆಯನ್ನು ಸಿಸಿಬಿ ಅಥವಾ ಸಿಬಿಐ ತನಿಖೆಗೆ ವಹಿಸುತ್ತೇನೆ’ ಎಂದು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದರು.

ಇದರಿಂದ ವಿಚಲಿತರಾದ ಬೆಸ್ಕಾಂ ಪರ ಹಾಗೂ ನೌಕರರ ಸಂಘದ ವಕೀಲರು ಅರ್ಜಿ ಹಿಂಪಡೆದರು.

ಪ್ರಕರಣ ಏನು: ೧೯೯ರಲ್ಲಿ ಬೆಸ್ಕಾಂ ಏಳು ಸಾವಿರದಷ್ಟು ಸಿಬ್ಬಂದಿಯನ್ನು ತಾತ್ಕಾಲಿಕ ಮಜ್ದೂರ್ ಎಂದು ನೇಮಕ‌ ಮಾಡಿಕೊಂಡಿತ್ತು. ನಂತರ ೨೦೦೬ರಲ್ಲಿ ಏಕಾಏಕಿ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇವರಿಗೆಲ್ಲಾ ಹಿಂಬಾಕಿ ನೀಡದೆ ತೆಗೆದುಹಾಕಲಾಗಿತ್ತು. ಇವರಲ್ಲಿ ಕೆಲವರು ನಮಗೆ ಹಿಂಬಾಕೆ ಬೇಡ, ಕೆಲಸ ಕೊಡಿ ಎಂದು ಕೇಳಿದ್ದರು. ಇದಕ್ಕೆ ಅನುಗುಣವಾಗಿ 7 ಜನರಿಗೆ ಪುನಃ ಕೆಲಸ ನೀಡಲಾಗಿತ್ತು.

ಇವರಲ್ಲಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿ, ನಮಗೆ ಹಿಂಬಾಕಿ ನೀಡಿಲ್ಲ ಎಂದು ತಕರಾರು ತೆಗೆದಿದ್ದರು.

ಇದೇ ವೇಳೆ ಪರಿಹಾರವನ್ನು ಸಮರ್ಪಕವಾಗಿ ನೀಡಿಲ್ಲ. ಕೆಲವೊಂದು ವ್ಯತ್ಯಾಸಗಳಾಗಿವೆ ಎಂದು ಆಕ್ಷೇಪಿಸಿ ಕೆಪಿಟಿಸಿಎಲ್ ಕೂಡಾ ಹೈಕೋರ್ಟ್ ಮೆಟ್ಟಿಲೇರಿತ್ತು.

ಶುಕ್ರವಾರದಂದು ಈ ಪ್ರಕರಣದ ವಿಚಾರಣೆ ನಡೆಸಿದ ನಾರಾಯಣ ಸ್ವಾಮಿ, ಕೆಪಿಟಿಸಿಎಲ್ ವಕೀಲ ಬಿ.ಸಿ.ಪ್ರಭಾಕರ ಹಾಗೂ ನೌಕರರ ಸಂಘದ ಪರ ವಕೀಲ ಕೆ.ಶ್ರೀನಿವಾಸ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

‘ನೇಮಕ ಮಾಡಿಕೊಳ್ಳುವಾಗ ನೀವು ಯಾವ ಸೇವಾ ನಿಯಮಗಳನ್ನು ಅನುಸರಿಸಿದ್ದೀರಿ. ಮಹಿಳೆಯರು. ಎಸ್ಸಿ-ಎಸ್ಟಿ, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರು ಹಾಗೂ ನಿವೃತ್ತ ಸೈನಿಕರಿಗೆ ನೀಡಿರು ಕೋಟಾ ಎಷ್ಟು. ನಿಮ್ಮ ಮನಸ್ಸಿಗೆ ಬಂದಂತೆ ನೇಮಕ ಮಾಡಿಕೊಂಡಿದ್ದೀರಿ ಅಷ್ಟೇ ಅಲ್ಲ ಪರಿಹಾರವನ್ನೂ ನೀಡಿದ್ದೀರಿ. ಅಂದಿನ ಕೆಪಿಟಿಸಿಎಲ್ ಅಧ್ಯಕ್ಷ ಯಾರಿದ್ದರು ಎಂಬುದನ್ನು ಹೇಳಿ’ ಎಂದು ವಾಗ್ದಾಳಿ ನಡೆಸಿದರು.

ಇದರಿಂದ ಕಂಗೆಟ್ಟ ಇಬ್ಬರೂ ವಕೀಲರ ತಂತಮ್ಮ ಅರ್ಜಿಗಳನ್ನು ಹಿಂಪಡೆಯುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT