ಯಲ್ಲಾಪುರ: ಗ್ಯಾಂಗ್ರೀನ್ನಿಂದ ಬಳಲಿ ತ್ರಾಣ ಕಳೆದುಕೊಂಡಿದ್ದ 17 ವರ್ಷದ ಗಂಡು ಆನೆ ತಾಲ್ಲೂಕಿನ ಕಿರವತ್ತಿ ಸಮೀಪದ ತೆಂಗಿನಕೇರಿ ಕೆರೆಯ ಬಳಿ ಗುರುವಾರ ಮೃತಪಟ್ಟಿತು.
ಅರಣ್ಯ ಇಲಾಖೆಯ ಅಧಿಕಾರಿಗಳು, ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ಬಳಿಕ, ಕೆರೆಯ ಪಕ್ಕದಲ್ಲಿ ಕಳೇಬರದ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
‘ಆನೆಗೆ ಚಿಕಿತ್ಸೆ ನೀಡಲೆಂದು ಶಿವಮೊಗ್ಗದಿಂದ ತಜ್ಞರನ್ನು ಕರೆಸಲಾಗಿತ್ತು. ಆದರೆ, ಅರಣ್ಯದಲ್ಲಿ ಅದು ಸಿಗದ ಕಾರಣ ಚಿಕಿತ್ಸೆ ನೀಡಲು ಸಾಧ್ಯವಾಗಿರಲಿಲ್ಲ’ ಎಂದು ಎಸಿಎಫ್ ಅಶೋಕ ಭಟ್ಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಮೈ ತುಂಬಾ ಗಾಯಗಳಾಗಿದ್ದ ಆನೆ ಕಳೆದ 15 ದಿನಗಳಲ್ಲಿ ತಾಲ್ಲೂಕಿನ ಕಿರವತ್ತಿ, ಮದನೂರು ಭಾಗಗಳಲ್ಲಿ ಓಡಾಡುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಆನೆಯ ಚಲನವಲನದ ಮೇಲೆ ಗಮನವಿಟ್ಟಿದ್ದರೆ, ಹೊರತು ಚಿಕಿತ್ಸೆ ಕೊಡಿಸಲು ಮುಂದಾಗಲಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.