‘ಜೀವನ ಸುಲಭ; ಅದನ್ಯಾಕೆ ಅಷ್ಟೊಂದು ಕಠಿಣ ಮಾಡಿಕೊಳ್ಳಬೇಕು?’ ಎನ್ನುತ್ತಾ ಪ್ರಕೃತಿ ಜತೆ ಸರಳವಾಗಿ ಬದುಕುತ್ತಿರುವವರು ಥಾಯ್ಲೆಂಡಿನ ರೈತ ಜಾನ್ ಜಾನ್ಡಾಯ್. ಸಾವಯವ ಕೃಷಿ, ಬೀಜ ಸಂರಕ್ಷಣೆ, ಮಣ್ಣಿನ ಮನೆಗಳ ನಿರ್ಮಾಣದಲ್ಲಿ ಪರಿಣಿತನಾಗಿರುವ ಜಾನ್ಡಾಯ್, ‘ಪನ್ ಪನ್ ಸೆಂಟರ್’ ಸ್ಥಾಪಕ.
ಹಣ ಗಳಿಸಬೇಕು ಎಂಬ ಆಸೆ ಹೊತ್ತುಕೊಂಡು ಹಳ್ಳಿಯಿಂದ ಬ್ಯಾಂಕಾಕ್ಗೆ ವಲಸೆ ಬಂದ ಜಾನ್ಡಾಯ್, ಅಲ್ಲಿನ ಒತ್ತಡದ ಬದುಕಿನಿಂದ ಬೇಸತ್ತು ವಾಪಸ್ ಹಳ್ಳಿಗೆ ಬರುತ್ತಾರೆ. ಸ್ವಾವಲಂಬನೆ ಸಾಧಿಸುವ ತಮ್ಮ ಗುರಿಯನ್ನು ಒಂದೊಂದಾಗಿ ಈಡೇರಿಸಿಕೊಳ್ಳುತ್ತ, ನಿಸರ್ಗದ ಜತೆ ಬದುಕು ಎಷ್ಟೊಂದು ಸುಲಭವಿದೆಯಲ್ಲ ಎಂಬುದನ್ನು ಕಂಡುಕೊಳ್ಳುತ್ತಾರೆ.
ಜಪಾನಿನ ಮಸನೊಬು ಫುಕುವೊಕ ಅವರು ‘ಒಂದು ಹುಲ್ಲಿನ ಕ್ರಾಂತಿ’ ಮೂಲಕ ಕೃಷಿ ಹಾಗೂ ಬದುಕಿಗೆ ಹೊಸ ದೃಷ್ಟಿ ನೀಡಿದ ಹಾಗೆ ಥಾಯ್ಲೆಂಡಿನ ಜಾನ್ ಜಾನ್ಡಾಯ್ ಕೂಡ ನೆಮ್ಮದಿಯ ಜೀವನಕ್ಕೆ ಸರಳ ಸೂತ್ರಗಳನ್ನು ಪ್ರತಿಪಾದಿಸುತ್ತಿದ್ದಾರೆ; ಅದರಂತೆ ಬದುಕುತ್ತಿದ್ದಾರೆ. ಸದ್ದಿಲ್ಲದೇ ಜಗತ್ತೇ ಅವರತ್ತ ನೋಡತೊಡಗಿದೆ.
ದೇಸಿ ಬೀಜ ಸಂರಕ್ಷಣೆ ಕುರಿತಂತೆ ಸಾಕ್ಷ್ಯಚಿತ್ರವೊಂದರ ಚಿತ್ರೀಕರಣಕ್ಕಾಗಿ ತಮ್ಮ ತಂಡದ ಜತೆ ಕರ್ನಾಟಕವನ್ನು ಸುತ್ತುತ್ತಿರುವ ಜಾನ್ ಜಾನ್ಡಾಯ್, ಇಲ್ಲಿನ ಸಾವಯವ ಕೃಷಿ ಹಾಗೂ ಬೀಜ ಸಂರಕ್ಷಣೆ ಜ್ಞಾನವನ್ನು ದಾಖಲಿಸುತ್ತಿದ್ದಾರೆ. ಸಹಜ ಸಮೃದ್ಧ, ಜೈವಿಕ್ ಕೃಷಿಕ್ ಸೊಸೈಟಿ ಹಾಗೂ ದಿ ಗ್ರೀನ್ ಪಾತ್ ಸಹಯೋಗದಲ್ಲಿ ಜಾನ್ ಜಾನ್ಡಾಯ್ ಅವರ ಸಂವಾದವನ್ನು ಭಾನುವಾರ (ಏ. 15) ಸಂಜೆ 5ಕ್ಕೆ ಆಯೋಜಿಸಲಾಗಿದೆ.
‘ಲೈಫ್ ಈಸ್ ಈಜಿ. ವೈ ಡು ವಿ ಮೇಕ್ ಇಟ್ ಸೋ ಹಾರ್ಡ್’ ಎಂಬ ಮಾತಿನ ಮೂಲಕ ವಿಶ್ವವಿಖ್ಯಾತರಾಗಿರುವ ಜಾನ್ ಜಾನ್ಡಾಯ್, ಪ್ರಕೃತಿ ಜತೆಗಿನ ತಮ್ಮ ಒಡನಾಟವನ್ನು ಆಸಕ್ತರ ಎದುರು ತೆರೆದಿಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ: 080 2356 9777
ಆನಂದತೀರ್ಥ ಪ್ಯಾಟಿ ಅವರ ‘ಪನ್ ಪನ್ ಸಂತ’ ಪುಸ್ತಕ ಬಿಡುಗಡೆ: ಅತಿಥಿ–ಜಾನ್ ಜಾನ್ದಾಯ್. ಆಯೋಜನೆ–ಗ್ರೀನ್ಪಾತ್, ಜೈವಿಕ್ ಕರ್ನಾಟಕ, ಸಹಜ ಸಮೃದ್ಧ. ಸ್ಥಳ–‘ದಿ ಗ್ರೀನ್ ಪಾತ್’, ಮೆಟ್ರೋ ಸ್ಟೇಷನ್ ಎದುರು, ಸಂಪಿಗೆ ರಸ್ತೆ, ಮಲ್ಲೇಶ್ವರ. ಭಾನುವಾರ ಸಂಜೆ 5
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.