ಗುರುಗ್ರಾಮ: ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ವಿ.ಎಸ್. ಕೊಕ್ಜೆ ಆಯ್ಕೆಯಾಗಿದ್ದಾರೆ.
ಶನಿವಾರ ಇಲ್ಲಿ ನಡೆದ ಚುನಾವಣೆಯಲ್ಲಿ ಕೊಕ್ಜೆ ಅವರು ಒಟ್ಟು 192 ಪ್ರತಿನಿಧಿಗಳಲ್ಲಿ 131 ಪ್ರತಿನಿಧಿಗಳ ಮತಗಳನ್ನು ಪಡೆದು ಹಾಲಿ ಅಧ್ಯಕ್ಷ ರಾಘವ ರೆಡ್ಡಿ ಅವರನ್ನು ಸೋಲಿಸಿದರು.
ಐದು ದಶಕಗಳಲ್ಲಿ ಇದೇ ಮೊದಲ ಬಾರಿ ಚುನಾವಣೆ ನಡೆದಿದೆ. ಅಧ್ಯಕ್ಷರ ಆಯ್ಕೆಗೆ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ ಈ ಚುನಾವಣೆ ನಡೆಯಿತು.
ವಿಎಚ್ಪಿಗೆ ವಿದಾಯ: ಕಳೆದ ಮೂರು ದಶಕಗಳಿಂದ ವಿಎಚ್ಪಿ ಸಂಘಟನೆಯಲ್ಲಿ ತೊಡಗಿದ್ದ ಪ್ರವೀಣ್ ತೊಗಡಿಯಾ ಇದೀಗ ವಿದಾಯ ಹೇಳಿದ್ದಾರೆ. ಮಂಗಳವಾರದಿಂದ ಹಿಂದುತ್ವಕ್ಕಾಗಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾವು ಬೆಂಬಲಿಸಿದ್ದ ರಾಘವ ರೆಡ್ಡಿ ಪರಾಭವಗೊಂಡ ನಂತರ ತೊಗಡಿಯಾ ಈ ನಿರ್ಧಾರವನ್ನು ಪ್ರಕಟಿಸಿದರು.
‘ಇನ್ನು ಮುಂದೆ ನಾನು ವಿಎಚ್ಪಿಯಲ್ಲಿ ಇರುವುದಿಲ್ಲ. ಕಳೆದ 32 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿದ್ದೆ. ಹಿಂದೂಗಳಿಗಾಗಿ ನಾನು ಮನೆ ಮತ್ತು ವೈದ್ಯಕೀಯ ವೃತ್ತಿಯನ್ನು ತೊರೆದೆ. ಇನ್ನು ಮುಂದೆಯೂ ಹಿಂದೂಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.