ಬಳ್ಳಾರಿ: ‘ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ಮಂದಿರದ ಬಳಿ ಶುಕ್ರವಾರ ನಡೆದ ಘಟನೆಯ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ’ ಎಂದು ಸಂಸದ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
‘ಕಾಂಗ್ರೆಸ್ ಪಕ್ಷಕ್ಕೆ ನನ್ನ ಏಳ್ಗೆ ಸಹಿಸಲಾಗುತ್ತಿಲ್ಲ. ಅದಕ್ಕೆ ಇಂಥ ಘಟನೆಗಳಿಗೆ ಕುಮ್ಮಕ್ಕು ನೀಡಿದೆ. ನಿನ್ನೆಯ ಘಟನೆಯಿಂದ ನನಗೆ ಮಾತ್ರವಲ್ಲ, ನಾನು ಪ್ರತಿನಿಧಿಸುವ ಸಮುದಾಯಕ್ಕೂ ಅವಮಾನವಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ನಿನ್ನೆಯ ಘಟನೆಯಲ್ಲಿ ಕಲ್ಲು ತೂರಾಟದಿಂದ ಕಾರಿನ ಗಾಜು ಪುಡಿಯಾಗಿದೆ. ಬೆಂಬಲಿಗರಿಗೆ ಗಾಯಗಳಾಗಿವೆ. ತಿಪ್ಪೇಸ್ವಾಮಿ ಕಡೆಯವರು ಎನ್ನಲಾದ ಮೂರ್ನಾಲ್ಕು ಹಳ್ಳಿಯ ಮಂದಿ ಘಟನೆಗೆ ಕಾರಣ’ ಎಂದು ಹೇಳಿದರು.
‘ನಾನು ಬಿಎಸ್ಆರ್ ಪಕ್ಷ ಸ್ಥಾಪಿಸಿದಾಗ ತಿಪ್ಪೇಸ್ವಾಮಿ ಅವರಿಗೆ ಸ್ಪರ್ಧಿಸುವ ಅವಕಾಶ ನೀಡಿ ಗೆಲ್ಲಿಸಿದ್ದೆ. ಅದನ್ನು ಅವರು ಮರೆತಿದ್ದಾರೆ. ನಾನು ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಮತ್ತು ತಿಪ್ಪೇಸ್ವಾಮಿ ನನ್ನ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಲಿ ನೋಡೋಣ’ ಎಂದು ಸವಾಲು ಹಾಕಿದರು.