ಜೈಪುರ: ನಾಗೌರ್ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೆವಾನಿ ಅವರನ್ನು ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ತಡೆಯಲಾಯಿತು. ಜಿಲ್ಲಾಡಳಿತದ ಆದೇಶದ ಪ್ರಕಾರ ಅವರನ್ನು ತಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿಮಾನನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ನನ್ನನ್ನು ತಡೆದ ಪೊಲೀಸರು, ನಾಗೌರ್ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಪತ್ರ ನೀಡಿದರು. ರ್ಯಾಲಿಯಲ್ಲಿ ಭಾರತೀಯ ಸಂವಿಧಾನ ಹಾಗೂ ಅಂಬೇಡ್ಕರ್ ಕುರಿತು ಮಾತನಾಡಲು ಬಯಸಿದ್ದೆ’ ಎಂದು ಮೆವಾನಿ ಟ್ವೀಟ್ ಮಾಡಿದ್ದಾರೆ.
‘ನೀವು ಜೈಪುರದಲ್ಲೂ ತಿರುಗಾಡುವಂತಿಲ್ಲ. ಅಹಮದಾಬಾದ್ಗೆ ವಾಪಸ್ ಮರಳಿ ಎಂದು ಪೊಲೀಸರು ಹೇಳಿದರು. ಕನಿಷ್ಠ ಪತ್ರಿಕಾಗೋಷ್ಠಿ ನಡೆಸಲೂ ಅವಕಾಶ ನೀಡಲಿಲ್ಲ’ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
‘ಭಾರತ್ ಬಂದ್ ವೇಳೆ ಹಿಂಸಾಚಾರ ಸಂಭವಿಸಿದ್ದರಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಆದಕಾರಣ ಮೆವಾನಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ಜೈಪುರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.